Go to full page →

ದೇವರಮಕ್ಕಳು ಮುಂದೆಹೋಗಬೇಕು KanCCh 445

ಎಂತಹ ಸಂಶಯವಿರಲಿ ಅಥವಾ ಭಯವಿರಲಿ, ಕ್ರೈಸ್ತರು ನಂಬಿಕೆಯಿಂದ ಮುಂದೆ ಹೋಗಬೇಕು. ವರ್ತಮಾನದ ಸತ್ಯದಲ್ಲಿ ನಂಬಿಕೆಯಿರುವ ತನ್ನ ಜನರೊಂದಿಗೆ ದೇವರು ಕಾರ್ಯ ಮಾಡುತ್ತಿದ್ದಾನೆ. ಆತನು ಮಹತ್ವಪೂರ್ಣವಾದ ಫಲಿತಾಂಶ ಉಂಟಾಗುವಂತೆ ಯೋಜಿಸುತ್ತಿದ್ದಾನೆ. ದೇವರು ಇದಕ್ಕಾಗಿ ಕಾರ್ಯ ಮಾಡುತ್ತಿರುವಾಗ ತನ್ನ ಜನರು ಮುಂದೆ ಹೋಗುವಂತೆ ಹೇಳುತ್ತಾನೆ. ಮಾರ್ಗವು ಇನ್ನೂ ಸಹ ತೆರೆದಿಲ್ಲವೆಂಬುದು ನಿಜ, ಆದರೆ ದೇವರ ಜನರು ನಂಬಿಕೆಯ ಬಲದಿಂದ ಮುಂದೆನಡೆದಾಗ, ದೇವರು ಅವರಿಗೆ ದಾರಿಯು ಸ್ಪಷ್ಟವಾಗಿ ಕಾಣುವಂತೆ ಮಾಡುವನು. ಹಿಂದಿನಕಾಲದಲ್ಲಿ ಮೋಶೆ ಮತ್ತು ದೇವರ ವಿರುದ್ಧವಾಗಿ ಇಸ್ರಾಯೇಲ್ಯರು ಗುಣುಗುಟ್ಟಿದಂತೆ ಈಗಲೂ ಸಹ ಅನೇಕರು ಗುಣುಗುಟ್ಟುತ್ತಾರೆ. ದೇವರು ಅವರನ್ನು ತೀರಾ ಸಂಕಷ್ಟದಸ್ಥಿತಿಗೆ ತರುವುದು ತಮ್ಮನ್ನು ಪರೀಕ್ಷಿಸುವುದಕ್ಕಾಗಿ ಎಂಬುದನ್ನು ಅವರು ತಿಳಿಯಲು ವಿಫಲರಾಗುತ್ತಾರೆ. ಇಂತಹ ಪರಿಸ್ಥಿತಿಯಿಂದ ದೇವರುಮಾತ್ರವೇ ಅವರನ್ನು ಬಿಡುಗಡೆ ಮಾಡುವಾತನಾಗಿದ್ದಾನೆ. KanCCh 445.3

ಕ್ರೈಸ್ತ ಜೀವನವು ಅಪಾಯಕರವಾಗಿದ್ದು ತಮ್ಮ ಕರ್ತವ್ಯ ನಿರ್ವಹಿಸುವುದು ಕಠಿಣವೆಂಬ ಭಾವನೆ ಅನೇಕ ಸಂದರ್ಭಗಳಲ್ಲಿ ಬರುವುದುಂಟು. ಆದಾಗ್ಯೂ ಇಂತಹ ಹತಾಶೆಯ ಸ್ಥಿತಿಯಲ್ಲಿ “ಮುಂದೆ ಹೋಗು” ಎಂದು ದೇವರು ಸ್ಪಷ್ಟವಾಗಿ ಹೇಳುತ್ತಾನೆ. ಫಲಿತಾಂಶವು ಏನೇಇರಲಿ, ಮುಂದಿನದಾರಿಯು ಎಷ್ಟೇ ಕತ್ತಲಾಗಿರಲಿ, “ಮುಂದೆಹೋಗು” ಎಂಬ ದೇವರ ಆದೇಶಕ್ಕೆ ನಾವು ವಿಧೇಯರಾಗಬೇಕು. ಭಿನ್ನಾಭಿಪ್ರಾಯ ಮತ್ತು ಅರೆಮನಸ್ಸಿನಿಂದ ದೇವರಲ್ಲಿ ನಂಬಿಕೆ ಹೊಂದಿದ್ದಲ್ಲಿ ನಮ್ಮ ಜೀವನದಲ್ಲಿ ಸಂದೇಹ ತುಂಬಿರುತ್ತದೆ. ಲೋಕವು ಕೊಡುವ ಶಾಂತಿಯನ್ನಾಗಲಿ ಅಥವಾ ಧರ್ಮವು ಕೊಡುವ ಆದರಣೆಯನ್ನಾಗಲಿ ಆಗ ನಾವು ಅನುಭವಿಸಲು ಸಾಧ್ಯವಾಗುವುದಿಲ್ಲ. ಸೋಮಾರಿಗಳಾಗಿರಬಾರದು, ಬದಲಾಗಿ ಎಚ್ಚತ್ತು ಕ್ರಿಸ್ತನಲ್ಲಿ ಉನ್ನತವಾದ ಮಟ್ಟವನ್ನು ಮುಟ್ಟಲು ಪ್ರಯತ್ನಿಸಬೇಕು. ಇದು ನಮ್ಮ ಅವಕಾಶವಾಗಿದೆ. ಕ್ರಿಸ್ತನಿಗಾಗಿ ಎಲ್ಲವನ್ನೂ ತ್ಯಾಗಮಾಡುವುದು ನಮಗೆ ಒಂದು ಆಶೀರ್ವಾದಕರವಾದ ಅವಕಾಶವಾಗಿದೆ. ಇತರರ ಜೀವನದೊಂದಿಗೆ ನಮ್ಮನ್ನು ಹೋಲಿಕೆ ಮಾಡಬಾರದು. ಅವರನ್ನು ಅನುಕರಿಸಿದರೆ ನಾವು ಉನ್ನತವಾದ ಗುರಿಮುಟ್ಟಲು ಸಾಧ್ಯವಾಗದು. ನಮಗೆ ಯಥಾರ್ಥವಾದ ಏಕೈಕ ಮಾದರಿಯಿದೆ. ಕ್ರಿಸ್ತನನ್ನು ಮಾತ್ರ ಹಿಂಬಾಲಿಸುವುದು ನಮಗೆ ಸುರಕ್ಷೆಯಾಗಿದೆ. ಪರಲೋಕಕ್ಕಾಗಿ ನಮ್ಮ ಗುಣಸ್ವಭಾವಗಳನ್ನು ಬೆಳೆಸಿಕೊಳ್ಳಬೇಕು. ಕ್ರಿಸ್ತನ ಬರೋಣವು ಹತ್ತಿರವಾಗಿರುವುದರಿಂದ ಆತ್ಮೀಕವಾಗಿ ನಾವು ನಿದ್ರಿಸಬಾರದು. ಬದಲಾಗಿ ಯಥಾರ್ಥಚಿತ್ತದಿಂದಲೂ, ಪ್ರಾಮಾಣಿಕತೆಯಿಂದಲೂ ಎಚ್ಚರವಾಗಿರೋಣ . KanCCh 446.1

*****