Go to full page →

ಎಚ್ಚರಿಕೆಯ ಮಾತುಗಳು KanCCh 125

ಮದುವೆಯ ಬಗ್ಗೆ ಆಲೋಚಿಸುತ್ತಿರುವವರಿಗೆ ಶ್ರೀಮತಿ ವೈಟಮ್ಮನವರು ಎಚ್ಚರಿಕೆ ಕೊಡುತ್ತಾರೆ. ಯೌವನಸ್ಥರು ತಕ್ಷಣದ ಪ್ರಚೋದನೆಗೆ ಹೆಚ್ಚಾದ ವಿಶ್ವಾಸವಿಡುತ್ತಾರೆ. ಅವರು ತಮ್ಮ ಸಂಗಾತಿಯಾಗಲಿರುವವರ ಹೊರತೋರಿಕೆ ಆಕರ್ಷಣೆಗೆ ಅಥವಾ ಮನಮೋಹಕವಾದ ರೂಪಕ್ಕೆ ಇಲ್ಲವೆ ಮಾತಿಗೆ ತತ್‍ಕ್ಷಣದಲ್ಲಿಯೇಸುಲಭವಾಗಿ ಮರುಳಾಗಬಾರದು. ಈ ಕಾಲದಲ್ಲಿ ಯುವಕನು ತನ್ನನ್ನು ಮದುವೆಯಾಗುವಂತೆ ಯುವತಿಯಲ್ಲಿ ಪ್ರೇಮ ಯಾಚಿಸುವುದು ಮೋಸದ ಹಾಗೂ ಕಪಟತನದ ಒಂದು ಕುತಂತ್ರ ಯೋಜನೆಯಾಗಿದೆ. ಇದು ದೇವರಿಗಿಂತ ಹೆಚ್ಚಾಗಿ ಸೈತಾನನಿಂದ ಪ್ರೇರಿತವಾದದ್ದು. ಇಂತಹ ವಿಷಯದಲ್ಲಿ ಉತ್ತಮವಾಗಿ ಆಲೋಚಿಸುವುದು ಬಹಳ ಮುಖ್ಯ. ಆದರೆ ಈ ಕಾಲದಲ್ಲಿ ತಾಳ್ಮೆಯಿಂದ ಇದನ್ನು ಚಿಂತಿಸುವವರು ಕಡಿಮೆಯಾಗಿದ್ದಾರೆ. KanCCh 125.1

ಚಿತ್ರವಿಚಿತ್ರವಾದ ಕಲ್ಪನೆಗಳು, ಪ್ರೇಮಬಾಧೆಯ ಭಾವುಕತೆಗಳ ವಿರುದ್ಧ ಕುಷ್ಠರೋಗದಿಂದ ರಕ್ಷಿಸಿಕೊಳ್ಳುವಂತೆ ಸಂರಕ್ಷಿಸಿಕೊಳ್ಳಬೇಕು. ಈ ಕಾಲದಲ್ಲಿ ಅನೇಕ ಯುವಕ/ಯುವತಿಯರಲ್ಲಿ ಸದ್ಗುಣಶೀಲ ಸ್ವಭಾವ ಕಡಿಮೆ ಆಗಿರುವುದರಿಂದ, ಅತಿಯಾದ ಎಚ್ಚರಿಕೆಯಿಂದಿರಬೇಕು. ಯೌವನಸ್ಥರ ಧಾರ್ಮಿಕ ವಿಷಯದಲ್ಲಿ ಇಂತಹ ಕೆಳಮಟ್ಟದ ಭಾವುಕತೆ ಸೇರಿಕೊಂಡಿದೆ. ಸಹೋದರಿಯರೇ, ನಿಮ್ಮಲ್ಲಿ ಒಂದು ಸಂಪೂರ್ಣ ಬದಲಾವಣೆ ಕಂಡುಬರಬೇಕೆಂದು ದೇವರು ಬಯಸುತ್ತಾನೆಂದು ಶ್ರೀಮತಿ ವೈಟಮ್ಮನವರು ಯುವತಿಯರಿಗೆ ಎಚ್ಚರಿಕೆ ನೀಡುತ್ತಾರೆ. ನಿಮ್ಮ ಪ್ರೀತಿ ಉನ್ನತವಾಗಿರಲಿ. ನಿಮ್ಮ ಶಾರೀರಿಕ ಹಾಗೂ ಮಾನಸಿಕ ಶಕ್ತಿಯನ್ನು ನಿಮ್ಮನ್ನು ತನ್ನ ಅಮೂಲ್ಯ ರಕ್ತದಿಂದ ಕೊಂಡುಕೊಂಡಂತ ವಿಮೋಚಕನ ಸೇವೆಗಾಗಿ ಬಳಸಿರಿ. ನಿಮ್ಮೆಲ್ಲಾ ಕಾರ್ಯಗಳು ಕರ್ತನಲ್ಲಿ ಸಮರ್ಪಿತವಾಗುವಂತೆ ನಿಮ್ಮ ಆಲೋಚನೆಗಳು ಹಾಗೂ ಭಾವನೆಗಳು ಪರಿಶುದ್ಧವಾಗಿರಲೆಂದು ಶ್ರೀಮತಿ ವೈಟಮ್ಮನವರು ಯುವತಿಯರನ್ನು ದೈನ್ಯದಿಂದ ಬೇಡಿಕೊಳ್ಳುತ್ತಾರೆ. KanCCh 125.2

ತನ್ನನ್ನು ಮದುವೆಯಾಗಬೇಕೆಂದು ಯುವಕ/ ಯುವತಿಯರ ಹಿಂದೆ ಬಿದ್ದು ಹೆಚ್ಚಿನ ಸಮಯವನ್ನು ಅದರಲ್ಲಿಯೇ ಕಳೆಯುವವರನ್ನು ಸೈತಾನನ ದೂತರು ಬಹು ಎಚ್ಚರಿಕೆಯಿಂದ ಗಮನಿಸುತ್ತಾರೆ. ಅವರ ಆತ್ಮೀಕ ಕಣ್ಣುಗಳು ತೆರೆಯಲ್ಪಟ್ಟಲ್ಲಿ, ಒಬ್ಬ ದೇವದೂತನು ಅವರ ಮಾತುಗಳನ್ನು ಹಾಗೂ ಕಾರ್ಯಗಳನ್ನು ಪುಸ್ತಕದಲ್ಲಿ ಬರೆಯುವುದನ್ನು ನೋಡಬಹುದು. ಆರೋಗ್ಯದ ಮತ್ತು ಮಾನ ಮರ್ಯಾದೆಯ ನಿಯಮಗಳು ಅಲ್ಲಿ ಉಲ್ಲಂಘಿಸಲ್ಪಡುತ್ತವೆ. ಮದುವೆಯಾಗುವುದಕ್ಕೆ ಮುಂಚಿತವಾಗಿಯಲ್ಲ, ಬದಲಾಗಿ ದಾಂಪತ್ಯ ಜೀವನದಲ್ಲಿ ಯುವಕ ಯುವತಿಯರ ಪ್ರೇಮಯಾಚನೆಯ ಮಾತುಗಳು ಮುಂದುವರಿಯಲಿ, ಆದರೆಪ್ರೇಮದಲ್ಲಿರುವಾಗ ಇದ್ದಂತ ಬೆಚ್ಚನೆಯ ಪ್ರೀತಿ, ಅನುರಾಗವು, ಮದುವೆಯಾದ ನಂತರ ಎಷ್ಟೋ ಮಟ್ಟಿಗೆ ಕಡಿಮೆಯಾಗುವುದು ಅಥವಾ ಮುಕ್ತಾಯವಾಗುವುದು ಎಲ್ಲೆಡೆಯೂ ಕಂಡುಬರುವ ಸಾಮಾನ್ಯ ವಿಷಯವಾಗಿದೆ. KanCCh 125.3

ಯಾರ ಜೊತೆಯಲ್ಲಿ ಹೇಗೆ ವರ್ತಿಸಬೇಕೆಂದು ಸೈತಾನನಿಗೆ ಚೆನ್ನಾಗಿ ತಿಳಿದಿದೆ. ಅವನು ಅಂತಹ ಸಮಯದಲ್ಲಿ ತನ್ನ ಅಸಹ್ಯಕರವಾದ ಪೈಶಾಚಿಕ ಜ್ಞಾನವನ್ನು ಜನರ ನಾಶಕ್ಕಾಗಿ ಯಾವ ರೀತಿ ಬಳಸಬೇಕೆಂದು ಅನೇಕ ಕುತಂತ್ರಗಳನ್ನು ಉಪಯೋಗಿಸುತ್ತಾನೆ. ನಮ್ಮ ಪ್ರತಿಯೊಂದು ಹೆಜ್ಜೆಯನ್ನು ಅವನು ಗಮನಿಸುತ್ತಾನೆ ಹಾಗೂ ಅನೇಕ ಸಲಹೆಗಳನ್ನು ನೀಡುತ್ತಾನೆ. ದುರದೃಷ್ಟವಶಾತ್ ದೇವರ ಹಿತವಾದ ಸಲಹೆಗಳಿಗಿಂತಲೂ, ಸೈತಾನನ ಮಾತುಗಳಿಗೆ ಜನರು ಹೆಚ್ಚು ಗಮನ ಕೊಡುತ್ತಾರೆ. ಬಹುಜಾಣ್ಮೆಯಿಂದ ಹೆಣೆದ ಅಪಾಯಕಾರಿಯಾದ ಇಂತಹ ಬಲೆಗೆ ಅಜಾಗರೂಕರಾದ ಯೌವನಸ್ಥರು ಬೇಗನೆ ಬೀಳುತ್ತಾರೆ. ಈ ಬಲೆಯು ನೋಡಲು ಆಕರ್ಷಕವಾಗಿರುತ್ತದೆ. ಆದರೆ ಅದಕ್ಕೆ ಬಲಿಯಾಗುವವರು ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಎಲ್ಲೆಲ್ಲಿಯೂ ಮಾನವತೆಯು ನಾಶವಾಗಿರುವುದನ್ನು ಕಾಣಬಹುದು. KanCCh 126.1