Go to full page →

ಕ್ರಮಬದ್ಧವಾದ ನಾಜೂಕಿನ ಮತ್ತು ಪ್ರೀತಿಯ ಲಾಲನೆ ಪಾಲನೆ KanCCh 159

ಮಕ್ಕಳು ತಂದೆ-ತಾಯಂದಿರಿಗೆ ದೇವರು ಕೊಟ್ಟ ಒಂದು ಅಮೂಲ್ಯ ನಿಧಿಯಾಗಿದ್ದು, ಒಂದು ದಿನ ಆತನು ಅವರಿಂದ ಲೆಕ್ಕ ಕೇಳುತ್ತಾನೆ. ಅವರನ್ನು ಬೆಳೆಸುವುದಕ್ಕೆ, ಲಾಲನೆ ಪಾಲನೆ ಮಾಡುವುದಕ್ಕೆ ಹಾಗೂ ಪ್ರಾರ್ಥಿಸುವುದಕ್ಕೆ ತಂದೆ-ತಾಯಂದಿರು ಹೆಚ್ಚಿನ ಸಮಯ ಮೀಸಲಿಡಬೇಕು. ಅವರಿಗೆ ಸರಿಯಾದ ಸಲಹೆ, ಬುದ್ಧಿವಾದಗಳ ಅಗತ್ಯವಿದೆ. ಅನೇಕ ಸಂದರ್ಭಗಳಲ್ಲಿ ಮಗುವಿನ ಅನಾರೋಗ್ಯಕ್ಕೆ ನಮ್ಮ ತಪ್ಪಾದ ಆರೈಕೆ ನಿರ್ವಹಣೆಯೇ ಕಾರಣವಾಗಿರುತ್ತದೆ. ಕ್ರಮಬದ್ಧವಾಗಿ ಊಟಕೊಡದಿರುವುದು, ಚಳಿಗಾಲದಲ್ಲಿ ಬೆಚ್ಚಗಿನ ಬಟ್ಟೆಯಿಲ್ಲದಿರುವುದು, ರಕ್ತವು ಆರೋಗ್ಯಕರವಾಗಿ ಪರಿಚಲನೆಗೊಳ್ಳಲು ಬೇಕಾದ ಉತ್ತಮವ್ಯಾಯಾಮದ ಕೊರತೆ ರಕ್ತ ಶುದ್ದೀಕರಣಕ್ಕೆ ಬೇಕಾದ ಸಮೃದ್ಧಿಯಾದ ಆಮ್ಲಜನಕದ ಅಂದರೆ ಶುದ್ಧ ಗಾಳಿಯ ಕೊರತೆ - ಇವೆಲ್ಲವೂ ಮಗುವಿನ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದುದರಿಂದ ತಂದೆ-ತಾಯಿಯರು ಮೊದಲು ಶಿಶುವಿನ ಅನಾರೋಗ್ಯಕ್ಕೆ ಕಾರಣವನ್ನು ತಿಳಿದುಕೊಂಡು, ಸಾಧ್ಯವಾದಷ್ಟು ಬೇಗನೆ ಈ ಕಾರಣಗಳಿಗೆ ಪರಿಹಾರ ಕಂಡುಕೊಂಡಲ್ಲಿ ಅದು ಶೀಘ್ರವಾಗಿ ಚೇತರಿಸಿಕೊಳ್ಳುವುದು. KanCCh 159.2

ನೀವು ಬದುಕಿರುವುದೇ ಊಟ ಮಾಡುವುದಕ್ಕೆ ಎಂಬ ಮನೋಭಾವದಲ್ಲಿ ಮಕ್ಕಳನ್ನು ಸಾಮಾನ್ಯವಾಗಿ ಬಾಲ್ಯದಿಂದಲೇ ಬೆಳೆಸಲಾಗುತ್ತದೆ. ಮಕ್ಕಳು ಬಾಲ್ಯದಲ್ಲಿಯೇ ತಮ್ಮ ಗುಣಸ್ವಭಾವ ರೂಪಿಸಿಕೊಳ್ಳುವಲ್ಲಿ ತಾಯಿ ಪ್ರಮುಖ ಪಾತ್ರ ವಹಿಸುತ್ತಾಳೆ. ಆಕೆಯು ಅವರಿಗೆ ಆಹಾರದ ಬಗ್ಗೆ ಇರುವ ಅಪೇಕ್ಷೆಯನ್ನು ನಿಯಂತ್ರಿಸಿಕೊಳ್ಳಲು ತರಬೇತಿ ನೀಡಬಹುದು ಅಥವಾ ಬೇಕಾದಾಗೆಲ್ಲ ತಿನ್ನಿಸಿ ಹೊಟ್ಟೆಬಾಕರಾಗುವಂತೆಯೂ ಬೆಳೆಸಬಹುದು. ತಾಯಿ ಸಾಮಾನ್ಯವಾಗಿ ತನ್ನ ದಿನನಿತ್ಯದ ಕೆಲಸಕಾರ್ಯಗಳನ್ನು ಮುಗಿಸಲು ಒಂದು ನಿರ್ದಿಷ್ಟ ಯೋಜನೆ ಹಾಕಿರುತ್ತಾಳೆ. ಮಕ್ಕಳು ಆಕೆಗೆ ತೊಂದರೆ ಕೊಟ್ಟಾಗ, ಅವರ ದುಃಖ ಅಥವಾ ಇನ್ನಿತರ ಸಮಸ್ಯೆ ಬಗೆಹರಿಸಿ ಅವರನ್ನು ಸಮಾದಾನಗೊಳಿಸುವ ಬದಲು, ಆಕೆ ಅವರಿಗೆ ತಿನ್ನಲು ಏನಾದರೂ ಕೊಡುತ್ತಾಳೆ. ಇದು ಮಕ್ಕಳನ್ನು ತಾತ್ಕಾಲಿಕವಾಗಿ ಸಮಾಧಾನಗೊಳಿಸಿದರೂ, ಅನಂತರ ಅದರಿಂದ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಇದೆ. ಮಕ್ಕಳಿಗೆ ಆಹಾರದ ಅಗತ್ಯ ಸ್ವಲ್ಪವೂ ಇಲ್ಲದಿದ್ದರೂ ಬಲವಂತವಾಗಿ ಅವರ ಹೊಟ್ಟೆಯನ್ನು ಆಹಾರದಿಂದ ತುಂಬಿಸಲಾಗುತ್ತದೆ. ತಾಯಿ ತನ್ನ ಅಲ್ಪಸಮಯ ಹಾಗೂ ಗಮನ ಕೊಟ್ಟರೆ ಮಕ್ಕಳ ಸಮಸ್ಯೆ ತೀರುತ್ತದೆ. ಆದರೆ ತನ್ನ ಮನೆಯ ಕಾರ್ಯಕ್ಕೆ ಅವಳು ಹೆಚ್ಚು ಗಮನ ನೀಡುತ್ತಾಳೆಯೇ ಹೊರತು ತನ್ನ ಮಕ್ಕಳ ಆರೋಗ್ಯ ಮತ್ತು ಸಂತೋಷ ಆಕೆಗೆ ಮುಖ್ಯವಾಗಿರುವುದಿಲ್ಲ. KanCCh 160.1

ಮಕ್ಕಳಿಗೆ ಆರೋಗ್ಯಕರವೂ, ಹಿತಕರವೂ ಆದ ಬಟ್ಟೆಗಳನ್ನು ತೊಡಬೇಕೇ ಹೊರತು, ಇತರರ ಮೆಚ್ಚುಗೆ ಪಡೆಯಬೇಕೆಂಬ ಬಯಕೆಯಿಂದ ನವನವೀನ ಶೈಲಿಯ ಬಟ್ಟೆ ತೋಡಿಸಬಾರದು. ಅವರ ಬಟ್ಟೆಯು ಸುಂದರವಾಗಿ ಕಾಣುವಂತೆ ತಾಯಿ ತನ್ನ ಶ್ರಮವನ್ನು ಕಸೂತಿ ಹಾಕುವುದಕ್ಕೂ, ಚಿತ್ರವಿಚಿತ್ರ ಹೆಣೆಗೆ ಹಾಕುವುದಕ್ಕೂ ಉಪಯೋಗಿಸಬಾರದು. ಇದರಿಂದ ಆಕೆಗೆ ಹೆಚ್ಚು ದಣಿವಾಗುವುದಲ್ಲದೆ, ಆರೋಗ್ಯಕ್ಕೂ ತೊಂದರೆಯಾಗಬಹುದು. ವಿಶ್ರಾಂತಿ ಮತ್ತು ಹಿತಕರವಾದ ವ್ಯಾಯಾಮದ ಅಗತ್ಯವಿರುವಾಗ ತಾಯಿ ಕಣ್ಣುಗಳಿಗೂ ಮತ್ತು ನರಗಳಿಗೂ ದಣಿವಾಗುವಂತ ಹೊಲಿಗೆ, ಕಸೂತಿಯ ಕೆಲಸಗಳನ್ನು ಮಾಡಿ ಕಷ್ಟಪಡಬಾರದು. ಕುಟುಂಬದ ಕಾರ್ಯಗಳನ್ನು ನಿರ್ವಹಿಸುವುದಕ್ಕೆ ತನ್ನ ಶಕ್ತಿಸಾಮರ್ಥ್ಯ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವೆಂದು ತಾಯಿ ಮೊದಲು ಮನವರಿಕೆ ಮಾಡಿಕೊಳ್ಳಬೇಕು. KanCCh 160.2