Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮವೋ?
    ಮತ್ತಾಯ 19: 3.

    ಯೆಹೂದ್ಯರಲ್ಲಿ ಒಬ್ಬ ಮನುಷ್ಯನು ತನ್ನ ಹೆಂಡತಿಯನ್ನು ಒಂದು ಅಲ್ಪ ತಪ್ಪಿಗಾದರೂ ಪರಿತ್ಯಜಿಸಲು ಅನುಮತಿಯಿತ್ತು, ತರುವಾಯ ಆ ಹೆಂಗಸು ಪುನರ್ವಿವಾಹ ಮಾಡಿಕೊಳ್ಳಲು ಸ್ವತಂತ್ರಳಾಗಿದ್ದಳು. ಈ ಪದ್ಧತಿಯು ಮಹಾ ಅನಿಷ್ಠಕ್ಕೂ ಪಾಪಕ್ಕೂ ಮಾರ್ಗವಾಗಿತ್ತು, ಪರ್ವತ ಪ್ರಸಂಗದಲ್ಲಿ ಕ್ರಿಸ್ತನು, ಮದುವೆಯ ಗಂಭೀರ ಪ್ರತಿಜ್ಞೆಗೆ ನಿಷ್ಠೆಯಿಂದ ವರ್ತಿಸದಿದ್ದರೆ ಹೊರತು ಬೇರಾವ ಕಾರಣದಿಂದಲೂ ವಿಚ್ಛೆದನೆ ಇರಕೂಡದೆಂದು ಪರಿಷ್ಕಾರವಾಗಿ ತಿಳಿಸಿದನು. ಆತನು ಹೇಳಿದ್ದೇನಂದರೆ, “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ, ಮತ್ತು ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡಿದವನಾಗಿದ್ದಾನೆ.MBK 67.2

    ಪರಿಸಾಯರು ತರುವಾಯ ಆತನನ್ನು ಪತ್ನೀಪರಿತ್ಯಾಗ ಧರ್ಮವನ್ನು ಕುರಿತು ಪ್ರಶ್ನಿಸಿದಾಗ, ಸೃಷ್ಟಿಯಲ್ಲಿ ಮದುವೆಯು ದೈವಸಂಕಲ್ಪದಿಂದಾದುದೆಂದು ಅವರಿಗೆ ಹಿಂದಿನ ಅನುಭವವನ್ನು ಶ್ರುತಪಡಿಸಿದನು. ಮತ್ತು ಆತನು ಹೇಳಿದ್ದೇನಂದರೆ “ಮೋಶೆಯು ನಿಮ್ಮ ಮೊಂಡತನವನ್ನು ನೋಡಿ ನಿಮ್ಮ ಹೆಂದರನ್ನು ಬಿಟ್ಟುಬಿಡುವುದಕ್ಕೆ ಅಪ್ಪಣೆ ಕೊಟ್ಟನು. ಆದರೆ ಆದಿಯಿಂದಲೇ ಹಾಗೆ ಇರಲಿಲ್ಲ.” ಮತ್ತಾಯ 19: 8. ಆತನು ಅವರಿಗೆ ದೇವರು ಎಲ್ಲವನ್ನೂ ನೋಡಿ “ಬಹು ಒಳ್ಳೆಯದು” ಎಂದು ಹೇಳಿದ ಏದೇನಿನ ಪವಿತ್ರ ದಿನಗಳನ್ನು ಕುರಿತು ಹೇಳಿದನು. ಮಾನವರ ಹಿತಕ್ಕಾಗಿಯೂ ದೇವರ ಮಹಿಮೆಗಾಗಿಯೂ ಮದುವೆಯೂ ಮತ್ತು ಸಬ್ಬತ್ತೂ ಜೋಡಿ ನಿಯಮಗಳಾಗಿ ಸ್ಥಾಪಿಸಲ್ಪಟ್ಟವು. ಆಗ ಸೃಷ್ಟಿಕರ್ತನು ಆ ಪರಿಶುದ್ಧ ದಂಪತಿಗಳ ಹಸ್ತಗಳನ್ನು ದಾಂಪತ್ಯಸ್ಥಿಸಿಯಲ್ಲಿ ಸೇರಿಸಿದಾಗ ಆತನು ಹೇಳಿದ್ದೇನಂದರೆ “ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು.” ಆದಿಕಾಂಡ 2:24. ಮಾತ್ರವಲ್ಲದೆ ಯುಗದ ಸಮಾಪ್ತಿಯವರೆಗೂ ಈ ಮದುವೆಯ ಸಂಸ್ಕಾರವನ್ನು ಆದಾಮನ ಮಕ್ಕಳೆಲ್ಲರಿಗೂ ನಿಯಮಿಸಿದನು. ನಿತ್ಯನಾದ ತಂದೆಯು ತಾನೇ ಒಳ್ಳೇದೆಂದು ನುಡಿದದ್ದು, ಮನುಷ್ಯನಿಗೆ ಅತ್ಯುತ್ತಮ ಆಶೀರ್ವಾದದ ಮತ್ತು ವೃದ್ಧಿಯ ಆಜ್ಞೆಯಾಗಿತ್ತು.MBK 67.3

    ಮಾನವನ ಸಂರಕ್ಷಣಾರ್ಥವಾಗಿ ಕೊಡಲ್ಪಟ್ಟ ಪ್ರತಿಯೊಂದು ಒಳ್ಳೇ ಕಾರ್ಯದಂತೆ, ಮದುವೆಯೂ ಕೂಡ ಪಾಪದಿಂದ ಅಪಾರ್ಥವಾಗೆಳಿಸಲ್ಪಟ್ಟಿತು; ಆದರೂ ಅದರ ಪರಿಶುದ್ಧತ್ವವನ್ನೂ ಮತ್ತು ಲಾವಣ್ಯವನ್ನೂ ಪುನಃ ಸ್ಥಾಪಿಸುವುದೇ ಸುವಾರ್ತೆಯ ಉದ್ದೇಶವಾಗಿದೆ. ಹಳೆ ಹೊಸ ಒಡಂಬಡಿಕೆಗಳೆರಡರಲ್ಲೂ ಮದುವೆಯ ಸಂಬಂಧವು ಕ್ರಿಸ್ತನಿಗೂ ಮತ್ತು ಆತನು ಕಲ್ವೇರಿಯ ಮೇಲೆ ಕ್ರಯ ಕೊಟ್ಟುಕೊಂಡು ಕೊಳ್ಳಲ್ಪಟ್ಟ ಆತನ ಜನರಿಗೂ ಇರುವ ಮಮತೆಯ ಮತ್ತು ಪರಿಶುದ್ಧ ಸಂಪರ್ಕವನ್ನು ನಿರೂಪಿಸುತ್ತದೆ. ಆತನು ಹೇಳುವುದೇನಂದರೆ “ಹೆದರಬೇಡ,....ನಿನ್ನ ಸೃಷ್ಟಿಕರ್ತನೇ ನಿನ್ನ ಪತಿ; ಆತನ ಹೆಸರು ಸೇನಾಧೀಶ್ವರನಾದ ಯೆಹೋವ; ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನ ನ್ಯಾಯಸ್ಥಾಪಕನಾಗಿದ್ದಾನೆ.” “ಭ್ರಷ್ಟರಾದ ಮಕ್ಕಳೇ, ತಿರುಗಿಕೊಳ್ಳಿರಿ, ನಾನು ನಿಮಗೆ ಪತಿ” ಯೆಶಾಯ 54: 4, 5; ಯೆರೆಮೀಯ 3: 14. ಪರಮಗೀತದಲ್ಲಿ ವಧುವು ಹೇಳುವುದನ್ನು ಕೇಳುತ್ತೇವೆ. “ಎನ್ನಿನಿಯನು ನನ್ನವನೇ, ನಾನು ಅವನವಳೇ” “ಹತ್ತುಸಾವಿರ ಜನರಲ್ಲಿ ಧ್ವಜಪ್ರಾಯನಾದ” ಆಕೆಯ ಇನಿಯನು ತಾನು ಆರಿಸಿಕೊಂಡವಳನ್ನು ಕುರಿತು ಹೇಳುವುದೇನಂದರೆ “ನನ್ನ ಪ್ರಿಯಳೇ, ನೀನು ಸರ್ವಾಂಗ ಸುಂದರಿ, ನಿನ್ನಲ್ಲಿ ಯಾವ ದೋಷವೂ ಇಲ್ಲ.” ಪರಮಗೀತ 2: 16; 5: 1೦; 4: 7.MBK 68.1

    ಬಹಳ ಕಾಲನಂತರ ಅಪೋಸ್ತಲನಾದ ಪೌಲನು ಎಫೆಸದ ಕ್ರೈಸ್ತರಿಗೆ ಬರೆಯುತ್ತಾ, ಕರ್ತನು ಗಂಡಂದಿರನ್ನು ಹೆಂಡತಿಯರಿಗೆ ತಲೆಯಾಗಿಯೂ, ಆಕೆಯ ಮತ್ತು ಕುಟುಂಬದವರೆಲ್ಲರ ರಕ್ಷಕನಾಗಿಯೂ ಇರುವಂತೆ, ಕ್ರಿಸ್ತನೂ ಸಭೆಗೆ ಶಿರಸ್ಸಾಗಿ, ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. “ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರಿಯರು ತಮ್ಮ ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು. ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವುದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು. ಅದನ್ನು ಕಳಂಕ ಸುಕ್ಕು ಮುಂತಾದ್ದೊಂದೂ ಇಲ್ಲದ ಕನ್ನಿಕೆಯೋ ಎಂಬಂತೆ ಪರಿಶುದ್ಧವೂ ನಿರ್ದೋಷವೂ ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಬೇಕೆಂದು ವಾಕ್ಯೋಪದೇಶ ಸಹಿತವಾದ ಜಲಸ್ನಾನವನ್ನು ಮಾಡಿಸಿ ಶುದ್ಧಮಾಡಿದನು. ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ” ಎಫೆಸ 5: 24-28.MBK 69.1

    ಕ್ರಿಸ್ತನ ಕೃಪೆ- ಇದು ಮಾತ್ರವೇ, ಈ ಸಂಸ್ಕಾರವನ್ನು ದೇವರು ಎಣಿಸಿದಂತೆ ಮಾಡಲು ಸಾಧ್ಯ,-ಮಾನವ ಸಂತಾನದ ಆಶೀರ್ವಾದಕ್ಕಾಗಿಯೂ ಮತ್ತು ಉದ್ಧಾರಕ್ಕಾಗಿಯೂ ಉಂಟಾದ ಸಾಧನ. ಹೀಗೆ ಭೂಮಿಯ ಮೇಲಿನ ಕುಟುಂಬಗಳು, ತಮ್ಮ ಅನ್ಯೋನ್ಯ ಸಮಾಧಾನ ಪ್ರೀತಿಗಳಿಂದ, ಪರಲೋಕದ ಕುಟುಂಬವನ್ನು ನಿರೂಪಿಸುವವು.MBK 69.2

    ಈಗಲಾದರೋ, ಕ್ರಿಸ್ತನ ದಿನಗಳಲ್ಲಿದ್ದಂತೆ, ಸಮಾಜದ ಸ್ಥಿತಿಗತಿಗಳು ಪರಲೋಕದ ಪರಿಶುದ್ಧ ಸಂಬಂಧದ ವಿಷಯದಲ್ಲಿ ಪರಿತಾಪಕರವಾದ ಗುಣವಿಮರ್ಷೆಯನ್ನು ಮಾಡುವುದಾಗಿವೆ. ಆದರೂ, ಒಡನಾಟ ಮತ್ತು ಸಂತೋಷಗಳನ್ನು ನಿರೀಕ್ಷಿಸಿದರೂ ಕರಕರೆಯನ್ನೂ ಆಶಾಭಂಗವನ್ನೂ ಹೊಂದಿದವರಿಗೂ, ಯೇಸುಕ್ರಿಸ್ತನ ಸುವಾರ್ತೆಯು ಉಪಶಮನವನ್ನು ಕೊಡುತ್ತದೆ. ಆತನ ಆತ್ಮನು ಅನುಗ್ರಹಿಸುವ ಸಹನೆ ಮತ್ತು ಶಾಂತತೆಯು ಕರಕರೆಯನ್ನು ಮಧುರವಾಗಿ ಮಾಡುವುವು. ಕ್ರಿಸ್ತನು ಯಾವ ಹೃದಯದಲ್ಲಿ ನೆಲೆಸಿದ್ದಾನೋ ಅದು ಆತನ ಪ್ರೀತಿಯಿಂದ ಪರಿಪೂರ್ಣವಾಗಿ ತುಂಬಿ, ತೃಪ್ತಿಗೊಂಡು ಕರುಣೆಯನ್ನೂ ಇತರರ ಗಮನವನ್ನೂ ತನ್ನ ಕಡೆಗೆ ಸೆಳೆಯುವ ಹಂಬಲಿಕೆಯಿಂದ ದಹಿಸಲ್ಪಡದು. ಆತ್ಮವನ್ನು ದೇವರಿಗೆ ಅಧೀನ ಮಾಡುವುದರಿಂದ, ಮಾನವಜ್ಞಾನವು ಮಾಡಲಾರದುದನ್ನು ಆತನ ಜ್ಞಾನ ವು ಈಡೇರಿಸುವುದು. ಆತನ ಕೃಪೆಯ ಪ್ರಕಟನೆಯ ಮೂಲಕವಾಗಿ, ಉದಾಸೀನದಿಂದ ವಿಮುಖಗೊಂಡಿದ್ದ ಹೃದಯಗಳು ಲೋಕದವುಗಳಿಗಿಂತಲೂ ಹೆಚ್ಚು ಬಾಳಿಕೆಯೂ ಸ್ಥಿರವೂ ಆದ ಒಡಂಬಡಿಕೆಗಳಿಂದ ಬಂಧಿತರಾಗಬಹುದು, - ಸಂಕಟ ಪರೀಕ್ಷೆಯ ವೇಳೆಯಲ್ಲಿ ಸಹನೆಯನ್ನು ತೋರಿಸುವ ಮಮತೆಯ ಅಮೂಲ್ಯ ಒಡಂಬಡಿಕೆಯಲ್ಲಿ ಬಂಧಿತರಾಗುವರು.MBK 69.3