Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನೊಂದಿಗೂ ಮತ್ತು ಪರಸ್ಪರ ಒಂದಾಗಿರುವುದು ನಮ್ಮ ಏಕೈಕ ರಕ್ಷಣೆ

    ಕ್ರೈಸ್ತರ ನಡುವೆ ವೈಮನಸ್ಸು, ಭಿನ್ನಾಭಿಪ್ರಾಯ ಇರುವುದು ಲೋಕಕ್ಕೆ ಬಹಳ ತೃಪ್ತಿಕೊಡುತ್ತದೆ. ಕ್ರೈಸ್ತರಲ್ಲಿ ತಮ್ಮ ಧರ್ಮದ ಬಗ್ಗೆ ಅವಿಶ್ವಾಸ, ಅಪನಂಬಿಕೆ ಇರುವುದು ಇತರರಿಗೆ ಸಂತೋಷ ಉಂಟುಮಾಡುತ್ತದೆ. ತನ್ನ ಜನರಲ್ಲಿರುವ ಇಂತಹ ಮನೋಭಾವವು ಬದಲಾಗಬೇಕೆಂದು ದೇವರು ಕರೆನೀಡುತ್ತಾನೆ. ಈ ಅಂತ್ಯಕಾಲದಲ್ಲಿ ಕ್ರಿಸ್ತನೊಂದಿಗೂ ಮತ್ತು ಒಬ್ಬರಿಗೊಬ್ಬರು ಪರಸ್ಪರ ಐಕ್ಯತೆಯಿಂದ ಇರುವುದೇ ಕ್ರೈಸ್ತರ ಏಕೈಕ ರಕ್ಷಣೆಯಾಗಿದೆ. ಸೈತಾನನು ನಮ್ಮ ಸಭೆಯ ವಿಶ್ವಾಸಿಗಳನ್ನು ನೋಡಿ “ಕ್ರೈಸ್ತರೆಂದು ಹೇಳಿಕೊಳ್ಳುವ ಇವರು ಹೇಗೆ ಒಬ್ಬರಿಗೊಬ್ಬರು ದ್ವೇಷಿಸುತ್ತಾರೆ. ನನ್ನೊಂದಿಗೆ ಹೋರಾಡುವುದಕ್ಕಿಂತ ಹೆಚ್ಚಾಗಿ ಇವರು ತಮ್ಮಲ್ಲಿಯೆ ಹೋರಾಡುವುದಕ್ಕೆ ತಮ್ಮ ಶಕ್ತಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಆದುದರಿಂದ ಇವರ ಬಗ್ಗೆ ಹೆದರಿಕೊಳ್ಳಲು ಯಾವುದೇ ಕಾರಣವಿಲ್ಲ” ಎಂದು ಹೇಳಿಕೊಳ್ಳುವುದಕ್ಕೆ ಅವನಿಗೆ ಆಸ್ಪದಕೊಡಬಾರದು.KanCCh 17.2

    ಪಂಚಾಶತ್ತಮ ಹಬ್ಬದ ದಿನದಲ್ಲಿ ಪವಿತ್ರಾತ್ಮನು ಶಿಷ್ಯರಮೇಲೆ ಇಳಿದು ಬಂದ ನಂತರ (ಅ.ಕೃತ್ಯಗಳು 2:1-4). ಅವರು ಪುನರುತ್ಥಾನಗೊಂಡ ರಕ್ಷಕನಾದ ಕ್ರಿಸ್ತನ ಬಗ್ಗೆ ಎಲ್ಲಾಕಡೆಯೂ ಸಾರಿದರು. ಮಾನವರ ರಕ್ಷಣೆಯು ಶಿಷ್ಯರ ಒಂದೇ ಬಯಕೆಯಾಗಿತ್ತು. ಅವರೆಲ್ಲರೂ ಪರಸ್ಪರ ಅನ್ಯೋನ್ಯತೆಯಿಂದಲೂ ಸುವಾರ್ತೆಯ ಸತ್ಯಕ್ಕಾಗಿ ಎಂತದ್ದೇ ತ್ಯಾಗಕ್ಕೂ ಸಿದ್ಧರಾಗಿದ್ದರು. ಕ್ರಿಸ್ತನು ಅವರು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಆಜ್ಞಾಪಿಸಿದ್ದನು. ಅದರಂತೆಯೇ ಶಿಷ್ಯರ ದಿನನಿತ್ಯದ ವ್ಯವಹಾರದಲ್ಲಿ ಈ ಪ್ರೀತಿಯು ಕಂಡುಬಂದಿತ್ತು. ನಿಸ್ವಾರ್ಥತೆ ಹಾಗೂ ಒಳ್ಳೆಯಕ್ರಿಯೆಗಳ ಮೂಲಕ ಅವರು ಕ್ರಿಸ್ತನು ತೋರಿಸಿದಂತ ಪ್ರೀತಿಯನ್ನು ಇತರರಿಗೆ ತೋರಿಸಲು ಪ್ರಯತ್ನಿಸಿದರು.KanCCh 18.1

    ಪರಿಶುದ್ಧಾತ್ಮನು ಶಿಷ್ಯರಮೇಲೆ ಇಳಿದುಬಂದ ನಂತರ ಅವರು ಹೇಗೆ ಪರಸ್ಪರ ಪ್ರೀತಿಯಲ್ಲಿಯೂ, ಅನ್ಯೋನ್ಯತೆಯಲ್ಲಿಯೂ ಇದ್ದರೋ, ಅಂತಹ ಪ್ರೀತಿಯನ್ನು ಕ್ರೈಸ್ತ ವಿಶ್ವಾಸಿಗಳಾದ ನಾವೂ ಸಹ ಬೆಳೆಸಿಕೊಳ್ಳಬೇಕು. “ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವೂ ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು” (ಯೋಹಾನ 13:34) ಎಂದು ಕ್ರಿಸ್ತನು ಕೊಟ್ಟ ಹೊಸ ಆಜ್ಞೆಯಂತೆ, ನಾವೂ ಸಹ ವಿಧೇಯತೆಯಿಂದ ಅದರಂತೆ ನಡೆಯಬೇಕು. ಶಿಷ್ಯರು ಕ್ರಿಸ್ತನೊಂದಿಗೆ ಎಷ್ಟರ ಮಟ್ಟಿಗೆ ನಿಕಟವಾಗಿ ಐಕ್ಯತೆಯಿಂದಿರುತ್ತಾರೋ, ಅಷ್ಟರ ಮಟ್ಟಿಗೆ ಅವರು ಆತನ ಆಜ್ಞೆಗಳನ್ನು ನೆರವೇರಿಸುತ್ತಾರೆ. ಕ್ರಿಸ್ತನ ನೀತಿಯಿಂದ ಅವರನ್ನು ಪಾಪದಿಂದ ವಿಮೋಚಿಸಿದ ರಕ್ಷಕನನ್ನು ಅವರು ಮಹಿಮೆ ಪಡಿಸಬೇಕಾಗಿತ್ತು. KanCCh 18.2

    ಆದರೆ ಆದಿಸಭೆಯ ಕ್ರೈಸ್ತರು ಇತರರಲ್ಲಿದ್ದ ಬಲಹೀನತೆಯನ್ನು ಎತ್ತಿ ಹೇಳತೊಡಗಿದರು. ಇತರರ ತಪ್ಪುಗಳನ್ನು ನೋಡಿದ ಈ ಕ್ರೈಸ್ತರು ಒಬ್ಬರಿಗೊಬ್ಬರು ತೀಕ್ಷ್ಣವಾಗಿ ಖಂಡಿಸಿತೊಡಗಿದರು. ಇದರಿಂದ ಅವರು ರಕ್ಷಕನಾದ ಕ್ರಿಸ್ತನಿಂದ ದೂರವಾದರಲ್ಲದೆ, ಆತನು ಪಾಪಿಗಳಿಗೆ ತೋರಿಸಿದ ಮಹಾಪ್ರೀತಿಯನ್ನು ಮರೆತರು. ಅವರು ಹೊರಗಿನ ಸಂಪ್ರದಾಯಗಳನ್ನು ಹೆಚ್ಚು ಶಿಸ್ತಿನಿಂದ ಪಾಲಿಸ ತೊಡಗಿದರು. ತಮ್ಮ ನಂಬಿಕೆಯನ್ನು ಕ್ರಿಯೆಗಳಿಂದ ತೋರಿಸಲಿಲ್ಲ. ಬದಲಾಗಿ ನಂಬಿಕೆಯನ್ನು ಸಿದ್ಧಾಂತವಾಗಿ ಮಾತ್ರ ತೆಗೆದುಕೊಂಡು, ಇತರರನ್ನು ಬಲವಾಗಿ ಖಂಡಿಸಲು ತೊಡಗಿದರು. ಇತರರನ್ನು ಖಂಡಿಸುವ ಉತ್ಸಾಹದಲ್ಲಿ ತಮ್ಮ ತಪ್ಪು ದೋಷಗಳನ್ನು ಅವರು ಮರೆತರು. ಕ್ರಿಸ್ತನು ತಿಳಿಸಿದ ಸಹೋದರ ಪ್ರೀತಿಯನ್ನು ಆದಿ ಕ್ರೈಸ್ತಸಭೆಯ ವಿಶ್ವಾಸಿಗಳು ಮರೆತರು. ಇದರ ಬಗ್ಗೆ ಅವರಿಗೆ ತಿಳುವಳಿಕೆ ಇಲ್ಲದ್ದು ದುಃಖಕರ ವಿಷಯ. ಇದರಿಂದಾಗಿ ಅವರ ಜೀವನದಲ್ಲಿ ಸಂತೋಷವಿಲ್ಲದೆ ಹೋಯಿತು ಹಾಗೂ ದೇವರ ಪ್ರೀತಿ ತಮ್ಮಲ್ಲಿ ಇಲ್ಲದ್ದರಿಂದ ಆತ್ಮೀಕವಾಗಿ ತಾವು ಅಂಧಕಾರದಲ್ಲಿದ್ದೇವೆಂದು ಅವರು ಅರಿತುಕೊಳ್ಳಲಿಲ್ಲ.KanCCh 18.3

    ಯೇಸುಸ್ವಾಮಿಯ ಪ್ರಿಯಶಿಷ್ಯನಾಗಿದ್ದ ಅಪೋಸ್ತಲನಾದ ಯೋಹಾನನು ಕ್ರೈಸ್ತ ಸಭೆಯಲ್ಲಿ ಇಂತಹ ಸಹೋದರ ಪ್ರೀತಿಯು ಕಡಿಮೆಯಾಗುತ್ತಾ ಬಂದಿದೆ ಎಂದು ತಿಳಿದುಕೊಂಡನು. ಈ ಕಾರಣದಿಂದಲೇ ಅವನು ತನ್ನ ಪತ್ರಿಕೆಗಳಲ್ಲಿ ಪ್ರೀತಿಗೆ ಹೆಚ್ಚು ಪ್ರಾಮುಖ್ಯನೀಡಿದನು. ಯೋಹಾನನು ತಾನು ಸಾಯುವ ದಿನದವರೆಗೂ ಕ್ರೈಸ್ತ ಸಹೋದರರು ಒಬ್ಬರಿಗೊಬ್ಬರು ಪ್ರೀತಿಸಬೇಕೆಂದು ಒತ್ತಿ ಹೇಳಿದನು. ಅವನು ಸಭೆಗಳಿಗೆ ಬರೆದ ಪತ್ರಿಕೆಗಳಲ್ಲಿ ಈ ವಿಷಯವು ತಿಳಿಸಲ್ಪಟ್ಟಿದೆ: “ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ, ಪ್ರೀತಿಯು ದೇವರಿಂದ ಬಂದದ್ದಾಗಿದೆ... ದೇವರು ತನ್ನ ಒಬ್ಬನೇಮಗನನ್ನು.... ಲೋಕಕ್ಕೆ ಕಳುಹಿಸಿ ಕೊಟ್ಟಿದ್ದರಲ್ಲಿಯೇ, ದೇವರಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. ಪ್ರಿಯರೇ, ದೇವರು ನಮ್ಮನು ಹೀಗೆ ಪ್ರೀತಿಸಿದಮೇಲೆ ನಾವೂಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ” ಎಂದು ಯೋಹಾನನು ಹೇಳುತ್ತಾನೆ (1 ಯೋಹಾನನು 4:7-11). KanCCh 18.4

    ದೇವರಸಭೆಯಲ್ಲಿ ಇಂದು ಸಹೋದರ ಪ್ರೀತಿಯು ಬಹಳವಾಗಿ ಕಡಿಮೆಯಾಗಿದೆ. ರಕ್ಷಕನನ್ನು ಪ್ರೀತಿಸುತ್ತೇನೆಂದು ಹೇಳಿಕೊಳ್ಳುವ ಅನೇಕರು ಕ್ರೈಸ್ತ ಅನ್ಯೋನ್ಯತೆಯಲ್ಲಿ ಸಭೆಯಲ್ಲಿರುವ ಇತರ ವಿಶ್ವಾಸಿಗಳನ್ನು ಪ್ರೀತಿಸದೆ ಅಲಕ್ಷ್ಯಮಾಡುತ್ತಾರೆ. ನಾವೆಲ್ಲರೂ ಸಹ ಒಂದೇನಂಬಿಕೆಗೂ, ಒಂದೇ ಕುಟುಂಬಕ್ಕೂ ಸೇರಿದವರು. ನಾವೆಲ್ಲರೂ ಸಹ ಪರಲೋಕದ ಒಬ್ಬನೇ ತಂದೆಯ ಮಕ್ಕಳಾಗಿದ್ದು, ನಿತ್ಯಜೀವದ ಭಾಗ್ಯಕರವಾದ ನಿರೀಕ್ಷೆಯನ್ನು ಎದುರು ನೋಡುವವರಾಗಿದ್ದೇವೆ. ಅಂದಮೇಲೆ ಕ್ರೈಸ್ತಸಹೋದರರಾದ ನಮ್ಮನ್ನು ಬಂಧಿಸುವ ಬಂಧವು ಎಷ್ಟೊಂದು ಆತ್ಮೀಯವಾಗಿರಬೇಕಲ್ಲವೇ! ನಮ್ಮ ನಂಬಿಕೆಯು ನಮ್ಮ ಹೃದಯವನ್ನು ಪವಿತ್ರಗೊಳಿಸುವ ಪರಿಣಾಮ ಉಂಟುಮಾಡುತ್ತಿದೆಯೇ ಎಂದು ಅನ್ಯರು ನಮ್ಮನ್ನು ಯಾವಾಗಲೂ ಗಮನಿಸುತ್ತಾರೆ. ನಮ್ಮ ಬಲಹೀನತೆ ಹಾಗೂ ನಮ್ಮ ನಡೆನುಡಿ ಕ್ರಿಯೆಗಳಲ್ಲಿ ಕಂಡುಬರುವ ದೋಷಗಳನ್ನು ಅವರು ತಕ್ಷಣದಲ್ಲಿಯೇ ತಿಳಿದುಕೊಳ್ಳುತ್ತಾರೆ. ನಮ್ಮ ಕ್ರೈಸ್ತ ನಂಬಿಕೆಗೆ ದೂಷಣೆ ತರುವ ಯಾವ ಅವಕಾಶವನ್ನೂ ಅನ್ಯರಿಗೆ ನಾವು ಕೊಡಬಾರದು. KanCCh 19.1