Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭಾವನೆಗಳು ಮಾತ್ರ ಪರಿಶುದ್ಧರಾಗಿದ್ದೇವೆಂಬುದಕ್ಕೆ ಒಂದು ಸೂಚನೆಯಲ್ಲ

    ಸಂತೋಷದ ಭಾವನೆಗಳು ಅಥವಾ ಸಂತೋಷವಿಲ್ಲದಿರುವುದು ಒಬ್ಬ ವ್ಯಕ್ತಿಯು ಪರಿಶುದ್ಧನಾಗಿರುವುದಕ್ಕೆ ಅಥವಾ ಪರಿಶುದ್ಧನಾಗಿಲ್ಲವೆಂದು ಹೇಳುವುದಕ್ಕೆ ಸಾಕ್ಷ್ಯಾಧಾರವಲ್ಲ. ತತ್‍ಕ್ಷಣದಲ್ಲಿ ಪರಿಶುದ್ಧತೆ ಹೊಂದುವುದೆಂಬ ಯಾವ ವಿಷಯವೂ ಇಲ್ಲ. ಪರಿಶುದ್ಧತೆ ಹೊಂದುವುದು ದಿನನಿತ್ಯದ ಕಾರ್ಯವಾಗಿದ್ದು, ನಾವು ಜೀವಿಸಿರುವವರೆಗೆ ಮುಂದುವರೆಯುತ್ತದೆ. ದಿನನಿತ್ಯವೂ ಶೋಧನೆಗೆ ವಿರುದ್ಧವಾಗಿ ಹೋರಾಟ ಮಾಡುತ್ತಾ, ತಮ್ಮ ಪಾಪಗಳ ಮೇಲೆ ಜಯ ಹೊಂದುತ್ತಾ ಹೃದಯದಲ್ಲಿಯೂ ಹಾಗೂ ಜೀವನದಲ್ಲಿ ಪರಿಶುದ್ಧತೆ ಬಯಸುವವರು ಎಂದಿಗೂ ಸಹ ತಾವು ಪವಿತ್ರರೆಂದು ಅಹಂಕಾರದಿಂದ ಕೊಚ್ಚಿಕೊಳ್ಳುವುದಿಲ್ಲ. ಅವರು ನೀತಿಗಾಗಿ ಹಸಿದು ದಾಹಗೊಂಡಿರುತ್ತಾರೆ. ಪಾಪವು ಅವರಿಗೆ ಅತ್ಯಂತ ಕೆಟ್ಟದ್ದೆಂದು ತೋರುತ್ತದೆ.KanCCh 38.1

    ನಮ್ಮಪಾಪಗಳ ಕಾರಣದಿಂದ ದೇವರು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ. ನಾವು ಪಾಪ ಮಾಡಿ ದೇವರಾತ್ಮನನ್ನು ದುಃಖಪಡಿಸಬಹುದು. ಆದರೆ ನಾವು ಅದಕ್ಕೆ ಪಶ್ಚಾತ್ತಾಪಪಟ್ಟು ಕುಗ್ಗಿಹೋದ ಹೃದಯದಿಂದ ಆತನ ಬಳಿಗೆ ಬರುವುದಾದರೆ, ಆತನು ಎಂದಿಗೂ ನಮ್ಮನ್ನು ತಳ್ಳಿಬಿಡುವುದಿಲ್ಲ. ತಪ್ಪಾದ ಭಾವನೆಗಳು ನಮ್ಮಲ್ಲಿ ಬೆಳೆದು ಬಂದಿರುವುದರಿಂದ ನಮ್ಮಲ್ಲಿ ಸ್ವಾರ್ಥ, ಅಹಂಕಾರ, ಅಸಹನೆ, ಗುಣಗುಟ್ಟುವಿಕೆ ಮುಂತಾದ ಕೆಟ್ಟಗುಣಗಳು ಕಂಡುಬರಬಹುದು. ಇವೆಲ್ಲವೂ ನಮ್ಮನ್ನು ದೇವರಿಂದ ಬೇರ್ಪಡಿಸುತ್ತವೆ. ನಾವು ಪಾಪಗಳನ್ನು ಒಪ್ಪಿ ಅರಿಕೆ ಮಾಡಿಕೊಳ್ಳಬೇಕು ಹಾಗೂ ದೇವರ ಕೃಪೆಯು ನಮ್ಮ ಹೃದಯದಲ್ಲಿ ಆಳವಾಗಿ ಕೆಲಸಮಾಡಬೇಕು. ತಾವು ಬಲಹೀನರೆಂದು ನಿರಾಶೆಗೊಂಡವರು ದೇವರಲ್ಲಿ ಬಲಿಷ್ಠಗೊಂಡು ತಮ್ಮ ಒಡೆಯನಿಗಾಗಿ ಶ್ರೇಷ್ಠವಾದ ಸೇವೆ ಮಾಡಬಹುದು. ಆದರೆ ಅಂತವರು ಸ್ವಾರ್ಥವನ್ನು ತೊರೆದು ಉನ್ನತವಾದ ಉದ್ದೇಶಗಳಿಂದ ಸೇವೆ ಮಾಡಬೇಕು.KanCCh 38.2

    ದೇವರ ಆಶೀರ್ವಾದ ಹೊಂದಿಕೊಳ್ಳಬೇಕಾದಲ್ಲಿ ತಮ್ಮಲ್ಲಿ ಬದಲಾವಣೆ ಕಂಡುಬಂದಿದೆ ಎಂದು ದೇವರಿಗೆ ತೋರಿಸಬೇಕೆಂದು ಕೆಲವರು ಭಾವಿಸಬಹುದು. ಆದರೆ ಇಂತಹ ಪ್ರಿಯ ದೇವಜನರು ಈಗಲೂ ಸಹ ಆತನ ಆಶೀರ್ವಾದ ಹೊಂದಿಕೊಳ್ಳಬಹುದು. ತಮ್ಮ ಬಲಹೀನತೆಗಳನ್ನು ಜಯಿಸಲು ಅವರಿಗೆ ದೇವರ ಕೃಪೆ ಹಾಗೂ ಕ್ರಿಸ್ತನ ಆತ್ಮನ ಸಹಾಯವಿರಬೇಕು. ಇಲ್ಲದಿದ್ದಲ್ಲಿ ಅವರಲ್ಲಿ ಕ್ರೈಸ್ತ ಗುಣಸ್ವಭಾವಗಳು ಕಂಡುಬರುವುದಿಲ್ಲ. ಪಾಪಿಗಳಾದ ನಾವು ಆತನ ಮೇಲೆ ಆತುಕೊಂಡು, ನಿಸ್ಸಹಾಯಕ ಸ್ಥಿತಿಯಲ್ಲಿ ಇದ್ದ ಹಾಗೆಯೇ ತನ್ನ ಬಳಿಗೆ ಬರಬೇಕೆಂದು ದೇವರು ಬಯಸುತ್ತಾನೆ ಪಶ್ಚಾತ್ತಾಪ ಹಾಗೂ ಪಾಪಕ್ಷಮೆಯು ಕ್ರಿಸ್ತನ ಮೂಲಕ ದೇವರಿಂದ ಬರುವ ಒಂದು ವರವಾಗಿದೆ. ಪವಿತ್ರಾತ್ಮನು ನಮ್ಮಲ್ಲಿ ಪಾಪದ ಅರುಹು ಹುಟ್ಟಿಸುತ್ತಾನೆ. ಆಗ ನಮಗೆ ಪಾಪಕ್ಷಮೆ ಅಗತ್ಯವೆಂಬ ಭಾವನೆ ಉಂಟಾಗುತ್ತದೆ. ಪಶ್ಚಾತ್ತಾಪದಿಂದ ಹೃದಯ ಕುಂದಿಹೋಗಿರುವವರು ಮಾತ್ರ ಕ್ಷಮಿಸಲ್ಪಡುವರು. ಆದರೆ ದೇವರ ಕೃಪೆಯು ಮಾತ್ರ ಒಬ್ಬನ ಹೃದಯದಲ್ಲಿ ಪಶ್ಚಾತ್ತಾಪ ಉಂಟು ಮಾಡುತ್ತದೆ. ನಮ್ಮೆಲ್ಲಾ ಬಲಹೀನತೆಗಳು ದೇವರಿಗೆ ತಿಳಿದಿರುವುದರಿಂದ, ಆತನು ನಮಗೆ ಸಹಾಯ ಮಾಡುತ್ತಾನೆ. ಕೆಲವು ವೇಳೆ ನಿರಾಶೆಯಿಂದ ನಮ್ಮ ಹೃದಯವು ಕುಂದಿಹೋಗಿ, ನಮ್ಮಮೇಲೆ ನಿರಾಶೆಯು ಜಯಹೊಂದುವಂತೆ ಕಂಡುಬರಬಹುದು. ಆದರೆ ನಾವು ಎಂದಿಗೂ ದೇವರ ಮೇಲಣ ವಿಶ್ವಾಸಬಿಡಬಾರದು. ಭಾವನೆಗಳಿರಲಿ ಅಥವಾ ಇಲ್ಲದಿರಲಿ ನಮ್ಮ ದೃಷ್ಟಿ ಯಾವಾಗಲೂ ಕ್ರಿಸ್ತನ ಮೇಲಿರಬೇಕು. ನಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು; ಅನಂತರ ಶಾಂತರಾಗಿ ದೇವರ ವಾಗ್ದಾನಗಳಲ್ಲಿ ಭರವಸವಿಡಬೇಕು. KanCCh 38.3

    ಕೆಲವು ವೇಳೆ ನಾವು ಅಯೋಗ್ಯರೆಂಬ ಆಳವಾದ ಭಾವನೆ ನಮ್ಮಲ್ಲಿ ಅಂಜಿಕೆ ತರಬಹುದು. ಆದರೆ ಇದರಿಂದ ದೇವರು ನಮ್ಮ ಬಗ್ಗೆ ಬದಲಾಗಿದ್ದಾನೆಂದಾಗಲಿ ಅಥವಾ ನಮ್ಮಲ್ಲಿ ದೇವರ ಬಗ್ಗೆ ವಿಶ್ವಾಸ ಕಡಿಮೆಯಾಗಿದೆ ಎಂದಾಗಲಿ ಇದರ ಅರ್ಥವಲ್ಲ. ಒಂದುಹಂತದವರೆಗೆ ನಮ್ಮಮನಸ್ಸಿನ ಭಾವೋದ್ವೇಗವನ್ನು ನಿಯಂತ್ರಿಸಲು ಪ್ರಯತ್ನಿಸಬಾರದು. ನೆನ್ನೆ ಇದ್ದಂತ ಶಾಂತಿ, ಸಂತೋಷ, ಇಂದು ಇಲ್ಲದಿರಬಹುದು. ಆದರೆ ನಾವು ನಂಬಿಕೆ ಹಾಗೂ ಭರವಸೆಯಿಂದ ಕ್ರಿಸ್ತನ ಮೇಲೆ ಆತುಕೊಳ್ಳಬೇಕು.KanCCh 39.1

    ಜಯ ಹೊಂದಿದವರಿಗೆ ದೇವರು ಕೊಡುವ ಜಯಮಾಲೆಗಳು ಅಂದರೆ ಕಿರೀಟಗಳನ್ನು ನಂಬಿಕೆಯಿಂದ ಗಮನವಿಟ್ಟು ನೋಡಿ. ಯಜ್ಞದ ಕುರಿಯಾದಾತನು ಯೋಗ್ಯನು ಯೋಗ್ಯನು ಎಂದು ವಿಮೋಚಿಸಲ್ಪಟ್ಟ ಭಕ್ತರು ಆನಂದಭರಿತರಾಗಿ ಸಂಭ್ರಮದಿಂದ ಹಾಡುವುದನ್ನು ಕೇಳಿ. ನೀವು ಊಹಿಸಿಕೊಳ್ಳುವ ಈ ದೃಶ್ಯಗಳೆಲ್ಲಾ ವಾಸ್ತವವೆಂದು ತಿಳಿದುಕೊಳ್ಳಲು ಪ್ರಯತ್ನಿಸಿ.KanCCh 39.2

    ನಮ್ಮ ಮನಸ್ಸು ಪರಲೋಕದ ಕಡೆಗಿದ್ದು, ಕ್ರಿಸ್ತನಲ್ಲಿ ನೆಲೆಗೊಂಡಿದ್ದಲ್ಲಿ ಸೈತಾನನ ಮೇಲಣ ಹೋರಾಟದಲ್ಲಿ ನಮಗೆ ಬಲ ಹಾಗೂ ಸಹಾಯ ದೊರೆಯುವುದು. ಶೀಘ್ರದಲ್ಲಿಯೇ ನಮಗೆ ದೊರೆಯಲಿರುವ ವೈಭವ ಹಾಗೂ ಮಹಿಮೆಯಿಂದ ಕೂಡಿದ ಪರಲೋಕದ ಕಡೆಗೆ ನಾವು ಧ್ಯಾನಮಾಡಿದಾಗ, ಈ ಲೋಕದ ಹೆಮ್ಮೆ ಮತ್ತು ಪ್ರೀತಿಯ ಆಕರ್ಷಣೆ ಇಲ್ಲದಾಗುವುದು. ಮನೋಹರವಾದ ಕ್ರಿಸ್ತನ ಮುಖದರ್ಶನದ ಮುಂದೆ ಲೌಕಿಕವಾದ ಎಲ್ಲಾ ಆಕರ್ಷಣೆಗಳು ಪ್ರಯೋಜನವಿಲ್ಲದಂತಾಗುವವು. KanCCh 39.3

    ಪೌಲನು ಸುವಾರ್ತಾಸೇವೆಗೆ ಅವಕಾಶವಿಲ್ಲದೆ, ಮರಣದಂಡನೆಗೆ ಒಪ್ಪಿಸಲ್ಪಟ್ಟವನಾಗಿ ರೋಮಾಪುರದಲ್ಲಿ ಸೆರೆಯಲ್ಲಿದ್ದರೂ, ಅವನು ದೇವರ ಮೇಲೆ ಸಂದೇಹಪಟ್ಟು ಹತಾಶೆಗೊಳ್ಳಲಿಲ್ಲ. ಅಂತಹ ಕತ್ತಲೆಕೋಣೆಯ ಗವಿಯಂತ ಸೆರೆಮನೆಯಲ್ಲಿದ್ದರೂ, ಪೌಲನು ಸಾಯುವ ಸಮಯದಲ್ಲಿ ನೀಡಿದ ಸಾಕ್ಷಿಯು ಅನಂತರದ ಶತಮಾನಗಳಲ್ಲಿ ಕ್ರಿಸ್ತನಿಗೋಸ್ಕರ ತಮ್ಮ ಪ್ರಾಣವನ್ನೇ ಬಲಿಕೊಟ್ಟವರ ಹೃದಯಗಳಲ್ಲಿ ಸ್ಫೂರ್ತಿ ನೀಡಿತು. ಅವನ ಪರಿಶುದ್ಧ ಜೀವನದಿಂದಾದ ಫಲಿತಾಂಶವನ್ನು ಈ ಕೆಳಗಿನ ವಾಕ್ಯಗಳು ಅತ್ಯಂತ ಸೂಕ್ತವಾಗಿ ಬಿಂಬಿಸುತ್ತವೆ. “ನಾನಂತೂ ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ನಾನು ಹೊರಟು ಹೋಗಬೇಕಾದ ಸಮಯವು ಸಮೀಪಕ್ಕೆಬಂದಿದೆ. ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ, ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ. ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು. ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು’ (2 ತಿಮೊಥೆ 4:6-8). KanCCh 40.1

    *****