Go to full page →

ದೇವರ ಪ್ರೀತಿಯಲ್ಲಿ ಭರವಸವಿಡಿರಿ KanCCh 223

ನಂಬಿಗಸ್ತನೂ, ದೇವರ ಸ್ನೇಹಿತನೂ ಆದ ಅಬ್ರಹಾಮನನ್ನು ನೆನಪಿಗೆ ತಂದುಕೊಳ್ಳಿ. ದೇವರು ಬೇರ್ಷೆಬದಲ್ಲಿ ಅವನಿಗೆ ಕೊಟ್ಟ ದರ್ಶನದ ದೈವೀಕ ಆದೇಶದಂತೆ ಅವನು ತನ್ನ ಮಗನಾದ ಇಸಾಕನೊಂದಿಗೆ ಪ್ರಯಾಣ ಹೊರಟನು. ದೇವರು ಹೇಳಿದಂತೆ ಮಗನನ್ನು ಬಲಿಕೊಡಬೇಕಾದ ಮೊರೀಯ ಬೆಟ್ಟವನ್ನು ಅವನು ದೃಷ್ಟಿಸುತ್ತಾನೆ. ದುಃಖಿತನಾದ ಅಬ್ರಹಾಮನು ನಡುಗುವ ಕೈಗಳಿಂದ ಮಗನಾದ ಇಸಾಕನನ್ನು ಕಟ್ಟುತ್ತಾನೆ. ತನ್ನ ತಂದೆಯ ಯಥಾರ್ಥತ್ವದ ಮೇಲೆ ವಿಶ್ವಾಸವಿಟ್ಟಿದ್ದ ಅವನು ತನ್ನನ್ನೇ ಬಲಿಯಾಗಿ ಅರ್ಪಿಸಲು ಒಪ್ಪುತ್ತಾನೆ. ತಂದೆಯಾದ ಅಬ್ರಹಾಮನ ನಂಬಿಕೆ ಮತ್ತು ಮಗನಾದ ಇಸಾಕನ ವಿಧೇಯತೆ ಸಂಪೂರ್ಣವಾಗಿ ಪರೀಕ್ಷಿಸಲ್ಪಟ್ಟಾಗ, ಯೆಹೋವನ ದೂತನು ಆಕಾಶದೊಳಗಿಂದ “.. ನೀನು ನಿನ್ನ ಒಬ್ಬನೇ ಮಗನನ್ನಾದರೂ, ಸಮರ್ಪಿಸುವುದಕ್ಕೆ ಹಿಂದೆಗೆಯಲಿಲ್ಲವಾದ್ದರಿಂದ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ತೋರಬಂತು” ಎಂದು ಹೇಳಿದನು (ಆದಿಕಾಂಡ 22:12). KanCCh 223.1

ಅಬ್ರಹಾಮನ ನಂಬಿಕೆಯ ಈ ಕಾರ್ಯವು ನಮ್ಮ ಪ್ರಯೋಜನಾರ್ಥವಾಗಿ ಬರೆಯಲ್ಪಟ್ಟಿದೆ. ದೇವರ ಅಪ್ಪಣೆಯ ಮೇರೆಗೆ ಮಾಡಬೇಕಾದ ಅಗತ್ಯವಾದ ಕಾರ್ಯವು ಎಷ್ಟೇ ಮನನೋಯಿಸುವಂತಿದ್ದರೂ, ಅದು ಆತನಲ್ಲಿ ನಾವು ಭರವಸೆಯಿಡಬೇಕೆಂಬ ಮಹತ್ವದ ಪಾಠ ಕಲಿಸುತ್ತದೆ. ಅಲ್ಲದೆ ಮಕ್ಕಳು ತಂದೆ ತಾಯಿಯರಿಗೂ ಮತ್ತು ದೇವರಿಗೂ ಪರಿಪೂರ್ಣವಾಗಿ ವಿಧೇಯರಾಗಿರಬೇಕೆಂದು ಬೋಧಿಸುತ್ತದೆ. ನಾವು ದೇವರಿಗೆ ಕೊಡಬೇಕಾದ ಯಾವುದೂ ಸಹ ಆತನಿಗಿಂತ ಅಮೂಲ್ಯವಲ್ಲವೆಂದು ಅಬ್ರಹಾಮನ ವಿಧೇಯತೆಯು ತಿಳಿಸುತ್ತದೆ. KanCCh 223.2

ದೇವರು ತನ್ನ ಮಗನಾದ ಯೇಸುಕ್ರಿಸ್ತನನ್ನು ಅಪಮಾನ, ನಿಂದನೆ, ದೂಷಣೆ, ಬಡತನ, ಕಠಿಣಪರಿಶ್ರಮ, ತ್ಯಾಗ ಮತ್ತು ಶಿಲುಬೆಯ ಮೇಲಿನ ವೇದನೆಯ ಮರಣ ಅನುಭವಿಸುವುದಕ್ಕೆ ಈ ಲೋಕಕ್ಕೆ ಕಳುಹಿಸಿಕೊಟ್ಟನು. “ನನ್ನ ಪ್ರಿಯಮಗನೇ, ನೀನು ಸಾಯಬೇಕಾಗಿಲ್ಲ” ಎಂದು ದೇವರು ಹೇಳಲಿಲ್ಲ. ಇಸಾಕನನ್ನು ಮರಣದಿಂದ ತಪ್ಪಿಸಿದಂತೆ ಅವಮಾನಕರವಾದ ಈ ಮರಣದಿಂದ ದೇವರು ಈ ಕೊನೆ ಕ್ಷಣದಲ್ಲಿ ತಪ್ಪಿಸುತ್ತಾನೆಂಬ ನಿರೀಕ್ಷೆಯಿಂದ ದುಃಖಿತರಾಗಿ ದೇವದೂತರ ಗಣಗಳು ಕಾದುಕೊಂಡಿದ್ದವು. ಆದರೆ ದೇವದೂತರ ಈ ನಿರೀಕ್ಷೆ ಸಫಲವಾಗಲಿಲ್ಲ. ಮಹಾಯಾಜಕನ ವಿಚಾರಣೆ ಮತ್ತು ದೇಶಾಧಿಪತಿಯಾದ ಪಿಲಾತನ ಅರಮನೆಯಲ್ಲಿ ನ್ಯಾಯವಿಚಾರಣೆ ಕಲ್ಯಾರಿ ಶಿಲುಬೆಯವರೆಗೂ ಮುಂದುವರಿಯಿತು. ಆತನನ್ನು ಅಪಹಾಸ್ಯ ಮಾಡಿ, ತಿರಸ್ಕರಿಸಿದ್ದಲ್ಲದೆ, ಮುಖದ ಮೇಲೆ ಉಗುಳಿದರು. ಕ್ರಿಸ್ತನು ಶಿಲುಬೆಯ ಮೇಲೆ ತಲೆಬಾಗಿಸಿ ಪ್ರಾಣಬಿಡುವವರೆಗೆ ತನ್ನ ವಿರೋಧಿಗಳ ದೂಷಣೆ, ಅಪಮಾನಗಳನ್ನು ಸಹಿಸಿಕೊಂಡನು. KanCCh 223.3

ತನ್ನ ಒಬ್ಬನೇಮಗನನ್ನು ಇಂತಹ ಕಷ್ಟಸಂಕಟದ ಮರಣವನ್ನು ಅನುಭವಿಸುವಂತೆ ಮಾಡಿದ ದೇವರ ಈ ಮಹಾಪ್ರೀತಿಗೆ ಇದಕ್ಕಿಂತ ಹೆಚ್ಚಿನ ಸಾಕ್ಷಾಧಾರ ದೇವರು ಕೊಡುವುದಕ್ಕಾದಿತೇ? ದೇವರು, ಮಾನವನಿಗೆ ಕೊಟ್ಟ ಈ ಮಹಾತ್ಯಾಗವು ಒಂದು ಉಚಿತಾರ್ಥವಾದ ವರವಾಗಿರುವಂತೆಯೇ ಆತನ ಅಪಾರ ಪ್ರೀತಿಗೆ ಸರಿಸಾಟಿಯಾದದ್ದು ಯಾವುದೂ ಇಲ್ಲ. ದೇವರ ಈ ವರಕ್ಕೆ ತಕ್ಕಂತೆ ನಮ್ಮ ವಿಧೇಯತೆಯೂ ಸಹ ಸರಿಸಮಾನವಾಗಿರಬೇಕು. ಅದು ಪರಿಪೂರ್ಣವಾಗಿರಬೇಕು. ಯಾವುದೇ ಕೊರತೆಯಿರಬಾರದು. ನಾವೆಲ್ಲರೂ ದೇವರಿಗೆ ಸಾಲಗಾರರಾಗಿದ್ದೇವೆ. ನಮ್ಮನ್ನು ನಾವೇ ಸ್ವ-ಇಚ್ಛೆಯಿಂದ ತ್ಯಾಗ ಮಾಡಿ ಆತನಿಗೆ ಒಪ್ಪಿಸಿಕೊಡಬೇಕು. ಇಂತಹ ವಿಧೇಯತೆಯನ್ನು ಮಾತ್ರ ದೇವರು ಅಂಗೀಕರಿಸುತ್ತಾನೆ. ದೇವರ ದಯೆ ಹಾಗೂ ಆತನ ಪ್ರೀತಿಯನ್ನು ಹೊಂದಿಕೊಳ್ಳುವ ಸದವಕಾಶ ಈಗ ನಮಗಿದೆ. ಈ ಪುಸ್ತಕ ಓದುತ್ತಿರುವ ಕೆಲವರಿಗೆ ಈ ವರ್ಷವು ಕೊನೆಯ ವರ್ಷವಾಗಿರಬಹುದು. KanCCh 224.1