Go to full page →

ಮಕ್ಕಳನ್ನು ಕ್ರಿಸ್ತನ ಕಡೆಗೆ ನಡೆಸಬೇಕು KanCCh 235

ಮಕ್ಕಳು ಒಳ್ಳೆಯದನ್ನೇ ಮಾಡಬೇಕೆಂದು ಬಯಸಬಹುದು ಮತ್ತು ತಮ್ಮ ತಂದೆತಾಯಿಯರು, ಪೋಷಕರಿಗೆ ಕರುಣೆ ತೋರಿಸಿ ವಿಧೇಯರಾಗಬೇಕೆಂದು ಉದ್ದೇಶ ಹೊಂದಿರಬಹುದು. ಆದರೆ ಈ ವಿಷಯದಲ್ಲಿ ಅವರಿಗೆ ಉತ್ತೇಜನ ಮತ್ತು ಸಹಾಯದ ಅಗತ್ಯವಿದೆ. ಮಕ್ಕಳು ಒಳ್ಳೆಯ ನಿರ್ಣಯಗಳನ್ನು ಮಾಡಬಹುದು, ಆದರೆ ಅವರ ಈ ಸಿದ್ಧಾಂತಗಳು ಧರ್ಮದಿಂದ ಬಲಗೊಳ್ಳದಿದ್ದಲ್ಲಿ ಹಾಗೂ ದೇವರ ಕೃಪೆಯು ಅವರ ಜೀವನದಲ್ಲಿ ಪರಿಣಾಮ ಬೀರದಿದ್ದಲ್ಲಿ ಮಕ್ಕಳು ಜೀವನದಲ್ಲಿ ತಮ್ಮ ಉದ್ದೇಶ ಸಾಧಿಸಲಾಗದು. KanCCh 235.3

ತಂದೆ ತಾಯಿಯರು ತಮ್ಮ ಮಕ್ಕಳ ನಿತ್ಯಜೀವಕ್ಕಾಗಿ ಶ್ರಮವಹಿಸಿ ಪ್ರಯತ್ನ ಮಾಡಬೇಕು. ಅವರಿಗೆ ಒಳ್ಳೆಯದನ್ನು ಬಾಲ್ಯದಿಂದಲೇ ಬೋಧಿಸಬೇಕು. ಮಕ್ಕಳು ಕೆಟ್ಟದ್ದನ್ನು ಬೇಗ ಕಲಿಯುವುದರಿಂದ ಅದರ ಬಗ್ಗೆ ಎಚ್ಚರಿಕೆಯಿಂದ ತಿಳುವಳಿಕೆ ನೀಡಬೇಕು. ಅವರು ಉತ್ತಮ ಕ್ರೈಸ್ತರಾಗಿ ಬೆಳೆಯುವಂತೆ, ಅವರಿಗೆ ಶಿಸ್ತನ್ನು ಆರಂಭದಿಂದಲೇ ಕಲಿಸಬೇಕು. ಮಕ್ಕಳು ನಿತ್ಯಜೀವಕ್ಕೆ ಬಾಧ್ಯಸ್ಥರಾಗುವಂತೆ ಮಾಡುವುದು ತಂದೆತಾಯಿಯರ ಆದ್ಯ ಕರ್ತವ್ಯವಾಗಿರಬೇಕು. ದೇವರರಾಜ್ಯದಲ್ಲಿ ಅವರು ಹೊಳೆಯುವ ಅಮೂಲ್ಯವಾದ ಆಭರಣಗಳನ್ನಾಗಿ ಮಾಡುವಂತ ಜವಾಬ್ದಾರಿ ತಮ್ಮ ಮೇಲಿದೆ ಎಂಬ ರೀತಿಯಲ್ಲಿ ತಂದೆತಾಯಿಯರು ವಿಶೇಷವಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳು ಇನ್ನೂ ಚಿಕ್ಕವರು, ಅವರಿಗೆ ಜವಾಬ್ದಾರಿ ಏನೆಂದು ಗೊತ್ತಿಲ್ಲ ಮತ್ತು ಪಾಪಗಳಿಗೆ ಪಶ್ಚಾತ್ತಾಪಪಟ್ಟು ಕ್ರಿಸ್ತನನ್ನು ಅಂಗೀಕರಿಸುವಂತ ವಯಸ್ಸು ಅವರಿಗಾಗಿಲ್ಲವೆಂದು ತಪ್ಪಾಗಿ ತಿಳಿದು ಮಕ್ಕಳನ್ನು ಹೆಚ್ಚು ಮುದ್ದು ಮಾಡುವ ವಿಷಯದಲ್ಲಿ ತಂದೆತಾಯಿಯರು ಬಹಳ ಎಚ್ಚರಿಕೆಯಾಗಿರಬೇಕು. KanCCh 235.4

ಮಕ್ಕಳ ಎಳೆಯ ಮನಸ್ಸಿಗೆ ಗ್ರಹಿಕೆಯಾಗುವ ರೀತಿಯಲ್ಲಿ ತಂದೆತಾಯಿಯರು ದೇವರ ರಕ್ಷಣಾಯೋಜನೆಯನ್ನು ಅವರಿಗೆ ಸರಳವಾಗಿ ವಿವರಿಸಿ ಹೇಳಬೇಕು. ಅವರು 10-12 ವರ್ಷವಾದಾಗ, ಕ್ರೈಸ್ತಧರ್ಮದ ಬಗ್ಗೆ ತಿಳಿಸಿ ಹೇಳಿದಲ್ಲಿ ಅದನ್ನು ಅರ್ಥಮಾಡಿಕೊಳ್ಳುವರು. ಅವರಿಗೆ ಸರಿಯಾದ ರೀತಿಯಲ್ಲಿ ಧಾರ್ಮಿಕ ಶಿಕ್ಷಣ ಬೋಧಿಸಿದಲ್ಲಿ ತಾವು ಪಾಪಿಗಳು ಹಾಗೂ ಕ್ರಿಸ್ತನ ಮೂಲಕ ರಕ್ಷಣೆ ಹೊಂದುತ್ತೇವೆಂಬ ಸರಿಯಾದ ಅಭಿಪ್ರಾಯ ಅವರಲ್ಲುಂಟಾಗುತ್ತದೆ. ಅನೇಕ ಬೋಧಕರ ಮಕ್ಕಳು ನಿತ್ಯಜೀವದ ವಿಷಯದಲ್ಲಿ ಸಾಮಾನ್ಯವಾಗಿ ಉದಾಸೀನತೆ ತೋರುತ್ತಾರೆ. ಅವರ ಎಳೆಯ ಮನಸ್ಸಿನಲ್ಲಿ ಅಚ್ಚಳಿಯದ ಪರಿಣಾಮ ಬೀರುವಂತ ಚಿನ್ನದಂತ ಅವಕಾಶ ಇಂತಹ ಉದಾಸೀನತೆಯಿಂದ ಕಳೆದುಹೋಗುತ್ತದೆ. KanCCh 236.1

ತಂದೆತಾಯಿಯರೇ, ನಿಮ್ಮ ಮೇಲಿರುವ ಜವಾಬ್ದಾರಿಯ ಪ್ರಾಮುಖ್ಯತೆಯ ಅರಿವು ನಿಮಗಿದೆಯೇ? ನಿಮ್ಮ ಮಕ್ಕಳನ್ನು ನೈತಿಕವಾಗಿ ಕುಗ್ಗಿಸುವಂತ ಅಪಾಯಕಾರಿ ಅಭ್ಯಾಸಗಳಿಂದ ರಕ್ಷಿಸುವ ಅಗತ್ಯ ನಿಮ್ಮ ಮೇಲಿದೆ ಎಂಬ ಚಿಂತೆ ನಿಮಗಿದೆಯೇ? ನಿಮ್ಮ ಮಕ್ಕಳ ಗುಣಸ್ವಭಾವದ ಬೆಳವಣಿಗೆಯಲ್ಲಿ ಒಳ್ಳೆಯ ಪ್ರಭಾವಬೀರುವಂತ ಗೆಳೆಯರು ಅವರಿಗಿದ್ದಾರೆಯೇ ಎಂಬುದನ್ನು ತಂದೆತಾಯಿಯರು ಖಚಿತಪಡಿಸಿಕೊಳ್ಳಬೇಕು. ಮಕ್ಕಳು ಎಲ್ಲಿ ಹೋಗುತ್ತಾರೆ? ಏನು ಮಾಡುತ್ತಾರೆಂಬುದನ್ನು ತಿಳಿದುಕೊಳ್ಳದೆ ರಾತ್ರಿಯಲ್ಲಿ ಅವರನ್ನು ಮನೆಯಿಂದ ಹೊರಗೆ ಹೋಗಲು ಅನುಮತಿ ನೀಡಬಾರದು. ನೈತಿಕ ಶುದ್ಧತೆಯ ಸಿದ್ಧಾಂತಗಳ ಬಗ್ಗೆ ಚಿಕ್ಕಂದಿನಿಂದಲೇ ಅವರಿಗೆ ಶಿಕ್ಷಣನೀಡಿ. ನಿತ್ಯಜೀವಕ್ಕಾಗಿ ಅವರನ್ನು ಸಿದ್ಧಪಡಿಸಬೇಕಾದ ನಿಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ. ಇದು ದೇವರು ಮಾಡಬೇಕೆಂದು ಆಜ್ಞಾಪಿಸಿರುವ ಕರ್ತವ್ಯವೆಂದು ಮಕ್ಕಳಿಗೆ ಮನಗಾಣಿಸಿ, ಹಿಂದಿನದನ್ನು ಅವರು ಮರೆಯುವಂತೆ ಮಾಡಲು ಪ್ರಾಮಾಣಿಕವಾಗಿ ಶ್ರಮಿಸಿ, ಲವೊದಿಕೀಯ ಸಭೆಯಂತೆ ಬೆಚ್ಚಗೂ ಅಲ್ಲದೂ ತಣ್ಣಗೂ ಅಲ್ಲದ ರೀತಿಯಲ್ಲಿ ಮಕ್ಕಳು ಇರಬಾರದು. ನಿಜವಾದ ಭಕ್ತಿಯನ್ನು ಪ್ರತಿಯೊಂದು ಕ್ರೈಸ್ತ ಕುಟುಂಬವೂ ಬೆಳೆಸಿಕೊಳ್ಳಬೇಕೆಂದು ಶ್ರೀಮತಿ ವೈಟಮ್ಮನವರು ತಂದೆತಾಯಿಯರನ್ನು ಪ್ರಬೋಧಿಸುತ್ತಾರೆ. ಸುಧಾರಣೆಯು ನಮ್ಮ ಮನೆಯಿಂದಲೇ ಆರಂಭವಾಗಲಿ. KanCCh 236.2