Go to full page →

ಕ್ರಿಸ್ತನ ನೀತಿಯೆಂಬ ವಸ್ತ್ರದಿಂದ ಧರಿಸಿಕೊಂಡಿರುವುದು KanCCh 458

ದೇವರಮಕ್ಕಳು ಆತನಮುಂದೆ ತಮ್ಮನ್ನು ಕುಗ್ಗಿಸಿಕೊಂಡು, ಹೃದಯದ ಶುದ್ಧತೆಗೋಸ್ಕರ ಬೇಡಿಕೊಳ್ಳುವಾಗ, “ಇವನ ಕೊಳೆಬಟ್ಟೆಗಳನ್ನು ತೆಗೆದುಬಿಡಿರಿ ಎಂದು ಅಪ್ಪಣೆಕೊಟ್ಟು, ಇಗೋ, ನಿನ್ನ ದೋಷವನ್ನು ನಿನ್ನಿಂದ ತೊಲಗಿಸಿದ್ದೇನೆ. ನಿನಗೆ ಶ್ರೇಷ್ಠ ವಸ್ತ್ರವನ್ನು ತೊಡಿಸುವೆನು” (ಜೆಕರ್ಯ 3:4) ಎಂಬ ಆದರಣೆಯ ಮಾತುಗಳನ್ನು ಕ್ರಿಸ್ತನು ಹೇಳಿದನು. ಕ್ರಿಸ್ತನ ಕಳಂಕರಹಿತವಾದ ನೀತಿಯ ವಸ್ತ್ರವು ಸಂಕಟ, ಶೋಧನೆಗಳಿಗೆ ಒಳಗಾದ, ಆದಾಗ್ಯೂ ನಂಬಿಗಸ್ತರಾದ ದೇವರ ಮಕ್ಕಳಿಗೆ ಕೊಡಲಾಗುತ್ತದೆ. ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟ ಉಳಿದ ಜನರು (Remnant) ಈ ಲೋಕದ ಭ್ರಷ್ಟತೆಯಿಂದ ಇನ್ನೆಂದಿಗೂ ಮಲಿನರಾಗದಂತೆ, ಮಹಿಮೆಯುಳ್ಳ ವಸ್ತ್ರ ಧರಿಸಿಕೊಳ್ಳುವರು. ಎಲ್ಲಾ ಕಾಲದಲ್ಲಿಯೂ ನಂಬಿಗಸ್ತರಾಗಿದ್ದ ಜನರೊಂದಿಗೆ ಇವರ ಹೆಸರುಗಳು ಯಜ್ಞದ ಕುರಿಯಾದಾತನ ಜೀವಬಾಧ್ಯರ ಪಟ್ಟಿಯಲ್ಲಿ ಉಳಿದಿರುತ್ತವೆ. ಇವರು ಮಹಾವಂಚಕನಾದ ಸೈತಾನನ ಕುತಂತ್ರಗಳನ್ನು ಪ್ರತಿರೋಧಿಸಿದ್ದಾರೆ, ಘಟಸರ್ಪನ ಗರ್ಜನೆಯಿಂದಲೂ ದೇವಜನರು ತಮ್ಮ ನಿಷ್ಠೆಯನ್ನು ಬದಲಾಯಿಸಲಿಲ್ಲ. ಇವರ ಪಾಪಗಳು ಪಾಪಕ್ಕೆ ಮೂಲಕಾರಣನಾದ ಸೈತಾನನಿಗೆ ವರ್ಗಾಯಿಸಲ್ಪಡುವುದು. KanCCh 458.2

ದೇವರ ನಂಬಿಗಸ್ತರಾದ ಉಳಿದ ಜನರ ಪಾಪಗಳು ಕ್ಷಮಿಸಲ್ಪಟ್ಟು, ಅವರನ್ನು ದೇವರು ಅಂಗೀಕರಿಸಿಕೊಂಡದ್ದಲ್ಲದೆ, ಅವರಿಗೆ ಗೌರವವು ಕೊಡಲ್ಪಡುವುದು. ಅವರ ತಲೆಗಳಮೇಲೆ ಅಂದವಾದ ಕಿರೀಟಗಳು ಹಾಕಲ್ಪಡುವವು. ಅವರು ದೇವರಿಗೆ ಯಾಜಕರೂ ಹಾಗೂ ರಾಜರೂ ಆಗುವರು. ಸೈತಾನನು ಈ ದೇವಜನರನ್ನು ನಾಶಮಾಡಲು ಪ್ರಯತ್ನಿಸುತ್ತಾ ಅವರ ವಿರುದ್ಧವಾಗಿ ದೋಷರೋಷಣೆ ಮಾಡುತ್ತಿರುವಾಗ, ಪರಿಶುದ್ಧ ದೇವದೂತರು ಮನುಷ್ಯರ ಕಣ್ಣಿಗೆಕಾಣದಂತೆ ಎಲ್ಲಾ ಕಡೆಯಲ್ಲಿಯೂ ಹೋಗುತ್ತಾ ಅವರಮೇಲೆ ಜೀವಸ್ವರೂಪನಾದ ದೇವರ ಮುದ್ರೆಹಾಕುವರು. ಇವರು ಯಜ್ಞದ ಕುರಿಯಾದ ಕ್ರಿಸ್ತನೊಂದಿಗೆ ಚೀಯೋನ್ ಪರ್ವತದಲ್ಲಿ ನಿಂತಿರುವರು. ಅವರ ಹಣೆಯ ಮೇಲೆ ಆತನಹೆಸರೂ, ಆತನ ತಂದೆಯ ಹೆಸರೂ ಬರೆಯಲ್ಪಟ್ಟಿರುತ್ತವೆ. ಅವರು ಸಿಂಹಾಸನದ ಮುಂದೆ ಹೊಸಹಾಡನ್ನು ಹಾಡುವರು. ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟ ಒಂದುಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು“... ಯಜ್ಞದ ಕುರಿಯಾದಾತನು ಎಲ್ಲಿಹೋದರೂ ಇವರು ಆತನ ಹಿಂದೆ ಹೋಗುವರು. ಇವರು ಮನುಷ್ಯರೊಳಗಿಂದ ಸ್ವಕೀಯಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮ ಫಲದಂತಾದರು. ಇವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ, ಇವರು ನಿರ್ದೋಷಿಗಳಾಗಿದ್ದಾರೆ” (ಪ್ರಕಟನೆ 14:1-5). KanCCh 458.3

*****