Go to full page →

ನಿಮ್ಮ ರಕ್ಷಣೆಯು ಸಮೀಪವಾಯಿತು KanCCh 461

ಲೋಕದಲ್ಲಿ ದಿನದಿಂದದಿನಕ್ಕೆ, ವಾರದಿಂದವಾರಕ್ಕೆ ನಡೆಯುತ್ತಿರುವ ಘೋರವಾದ ವಿಪತ್ತುಗಳನ್ನು ನೋಡುವಾಗ, ಇವು ಏನನ್ನು ಸೂಚಿಸುತ್ತವೆ? ಅತ್ಯಂತ ಭಯಾನಕವಾದ ನೈಸರ್ಗಿಕ ವಿಪತ್ತುಗಳು ಒಂದಾದ ನಂತರ ಮತ್ತೊಂದು ಶೀಘ್ರವಾಗಿ ಕಂಡುಬರುತ್ತಿವೆ. ಭೂಕಂಪ, ಚಂಡಮಾರುತ, ಬೆಂಕಿ, ಜಲಪ್ರಳಯ ಮುಂತಾದವುಗಳಿಂದ ಆಸ್ತಿ, ಪ್ರಾಣನಷ್ಟ ಉಂಟಾಗುವುದನ್ನು ನಾವು ದಿನದಿನವೂ ನೋಡುತ್ತೇವಲ್ಲವೇ! ಈ ನೈಸರ್ಗಿಕ ವಿಪತ್ತುಗಳು ಅವ್ಯವಸ್ಥಿತವೂ, ಅನಿಯಂತ್ರಿತವೂ ಆದ ಶಕ್ತಿಗಳಿಂದ ಉಂಟಾಗುತ್ತವೆಂದು ಮೇಲುನೋಟಕ್ಕೆ ತೋರಿಬಂದರೂ, ಇವುಗಳಲ್ಲಿ ದೇವರ ಉದ್ದೇಶವೇನೆಂದು ತಿಳಿಯಬಹುದು. ಮುಂದೆ ಬರಲಿರುವ ಅಪಾಯಗಳ ಬಗ್ಗೆ ಜನರನ್ನು ಎಚ್ಚರಿಸಲು ದೇವರು ಉಪಯೋಗಿಸುವ ಸಾಧನಗಳಲ್ಲಿ ಈ ನೈಸರ್ಗಿಕ ವಿಪತ್ತುಗಳು ಒಂದಾಗಿವೆ. KanCCh 461.1

ನಾವು ಮೊದಲು ನಂಬಿದ್ದಕ್ಕಿಂತ ಕ್ರಿಸ್ತನ ಬರೋಣವು ಬಹಳ ಹತ್ತಿರವಾಗಿದೆ. ಕ್ರಿಸ್ತನ ಮತ್ತು ಸೈತಾನನ ನಡುವಣ ಮಹಾಹೋರಾಟದ ಮುಕ್ತಾಯವು ಸಮೀಪವಾಗಿದೆ. ಲೋಕವು ದೇವರ ನ್ಯಾಯತೀರ್ಪಿನ ಶಿಕ್ಷೆ ಅನುಭವಿಸುತ್ತಿದೆ. “ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಎಂದು ಈ ಎಲ್ಲಾ ಘಟನೆಗಳು ನಮಗೆ ಗಂಭೀರವಾದ ಎಚ್ಚರಿಕೆ ನೀಡುತ್ತವೆ (ಮತ್ತಾಯ 24:44). KanCCh 461.2

ಆದರೆ ನಮ್ಮ ಅಡ್ವೆಂಟಿಸ್ಟ್ ಸಭೆಗಳಲ್ಲಿಯೂ, ಕಡೆಯ ಕಾಲದ ಸತ್ಯದ ನಿಜವಾದ ಅರ್ಥವೇನೆಂದು ತಿಳಿಯದ ಅನೇಕರಿದ್ದಾರೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಈ ಲೋಕದ ಅಂತ್ಯವು ಬಹಳ ಸಮೀಪವಾಗಿದೆ ಎಂದು ಸ್ಪಷ್ಟವಾಗಿ ತಿಳಿಸುವ ಸೂಚನೆಗಳು ನೆರವೇರುತ್ತಿರುವುದನ್ನು ಉದಾಸೀನ ಮಾಡಬಾರದೆಂದು ಅಂತವರಿಗೆ ಶ್ರೀಮತಿ ವೈಟಮ್ಮನವರು ಮನವಿ ಮಾಡುತ್ತಾರೆ. ತಮ್ಮ ರಕ್ಷಣೆಯನ್ನು ತಾತ್ಸಾರ ಮಾಡಿದವರಲ್ಲಿ ಎಷ್ಟೋ ಜನರು “ಅಯ್ಯೋ, ಸುಗ್ಗಿಕಾಲ ಮುಗಿದು ಹೋಯಿತು, ಬೇಸಿಗೆ ಮುಕ್ತಾಯವಾಯಿತು, ನಾವು ರಕ್ಷಿಸಲ್ಪಡಲಿಲ್ಲ“ವೆಂದು ದುಃಖದಿಂದ ಗೋಳಾಡುವರು. KanCCh 461.3

ನಾವು ಈ ಜಗತ್ತಿನ ಇತಿಹಾಸದ ಮುಕ್ತಾಯದ ಹಂತದಲ್ಲಿದ್ದೇವೆ. ಪ್ರವಾದನೆಗಳು ಬಹಳ ಶೀಘ್ರವಾಗಿ ನೆರವೇರುತ್ತಲಿವೆ. ಕೃಪೆಯಕಾಲ ಮುಕ್ತಾಯವಾಗುವ ಸಮಯವು ಬೇಗನೆ ಸಮೀಪಿಸುತ್ತಿದೆ. ಸಮಯವನ್ನು ನಾವು ಒಂದುಕ್ಷಣವಾದರೂ ವ್ಯರ್ಥ ಮಾಡಲಾಗದು. ಮೈಮರೆತು ನಾವು ನಿದ್ರಿಸಬಾರದು “ನನ್ನ ಯಜಮಾನನು ಬರುವುದಕ್ಕೆ ತಡಮಾಡುತ್ತಾನೆ” ಎಂದು ಯಾರೂ ಸಹ ತಮ್ಮ ಮನಸ್ಸಿನಲ್ಲಾಗಲಿ ಅಥವಾ ಕಾರ್ಯದಲ್ಲಾಗಲಿ ಹೇಳಬಾರದು (ಮತ್ತಾಯ 24:46-50). ಕ್ರಿಸ್ತನ ಶೀಘ್ರ ಬರೋಣದ ಸಂದೇಶವು ಮನಃಪೂರ್ವಕವಾದ ಎಚ್ಚರಿಕೆಯ ಮಾತುಗಳಿಂದ ಎಲ್ಲಾ ಕಡೆಯೂ ಕೇಳಿಬರಲಿ. ಸ್ತ್ರೀ ಪುರುಷರೆಲ್ಲರಿಗೂ ಪಶ್ಚಾತ್ತಾಪಪಟ್ಟು ಮುಂದೆ ಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವಂತೆ ನಾವು ಮನವರಿಕೆ ಮಾಡಬೇಕಾಗಿದೆ. ಮುಂದೆ ಏನಾಗುವುದೆಂದು ನಮಗೆ ತಿಳಿಯದಿರುವುದರಿಂದ, ಅವರು ತಕ್ಷಣವೇ ಸಿದ್ಧರಾಗುವಂತೆ ಅವರನ್ನು ಎಚ್ಚರಿಸಬೇಕಾಗಿದೆ. “ಯೆಹೋವನು ಸಿಕ್ಕುವ ಕಾಲದಲ್ಲಿಯೇ ಆತನನ್ನು ಆಶ್ರಯಿಸಿಕೊಳ್ಳಿರಿ” (ಯೆಶಾಯ 55:6) ಎಂದು ಎಲ್ಲಾ ಸಭಾಪಾಲಕರಾದ ಬೋಧಕರು, ಸಭಾಸೇವಕರು ಹಾಗೂ ಸದಸ್ಯರು ಉದಾಸೀನತೆ ತೋರುವವರ ಬಳಿಗೆ ಹೋಗಿ ಸಾರಿ ಹೇಳಬೇಕಾಗಿದೆ. ಸತ್ಯವೇದದ ಮರೆತುಹೋಗಿರುವ ಸತ್ಯಗಳನ್ನು ಅವರು ಎಲ್ಲೆಲ್ಲಿ ಸಾರುತ್ತಾರೋ, ಅಲ್ಲಿ ರಕ್ಷಣೆ ಹೊಂದಲು ಸಿದ್ಧರಾಗಿರುವವರನ್ನು ಕಂಡುಕೊಳ್ಳುತ್ತಾರೆ. ಸತ್ಯವನ್ನು ಅಂಗೀಕರಿಸಿಕೊಳ್ಳುವುದು ಮಾತ್ರವಲ್ಲದೆ, ಕ್ರಿಸ್ತನಿಗಾಗಿ ಇತರರನ್ನು ಗೆಲ್ಲಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವವರನ್ನು ಸಹ ಸಭಾಸೇವಕರು, ಪಾಲಕರು ಹಾಗೂ ಬೋಧಕರು ಕಂಡುಕೊಳ್ಳುತ್ತಾರೆ. KanCCh 461.4

ಕರ್ತನು ಶೀಘ್ರದಲ್ಲಿಯೇ ಬರುತ್ತಾನೆ, ಆತನನ್ನು ಸಮಾಧಾನದಿಂದ ಎದುರುಗೊಳ್ಳಲು ನಾವು ಸಿದ್ಧತೆ ಮಾಡಿಕೊಳ್ಳಬೇಕು. ನಮ್ಮ ನೆರೆಹೊರೆಯವರಿಗೆ ಕರ್ತನ ಸತ್ಯದಬೆಳಕನ್ನು ತಿಳಿಸುವುದಕ್ಕೆ ನಮ್ಮ ಶಕ್ತಿಮೀರಿ ಪ್ರಯತ್ನಿಸುವಂತೆ ದೃಢನಿರ್ಧಾರ ಮಾಡೋಣ. ನಾವು ದುಃಖಿಸಬಾರದು, ಬದಲಾಗಿ ಹರ್ಷ ಚಿತ್ತರಾಗಿದ್ದು, ಯಾವಾಗಲೂ ಕರ್ತನಾದ ಯೇಸುವಿನ ಮುಖವನ್ನು ದೃಷ್ಟಿಸಬೇಕು. ಆತನು ಶೀಘ್ರವೇ ಎರಡನೇಸಾರಿ ಬರಲಿದ್ದಾನೆ, ನಾವು ಆತನ ಪ್ರತ್ಯಕ್ಷತೆಗಾಗಿ ಸಿದ್ಧರಾಗಿ ಕಾದುಕೊಂಡಿರಬೇಕು. ಕ್ರಿಸ್ತನಿಂದ ವಿಮೋಚಿಸಲ್ಪಟ್ಟ ನಾವು ಆತನನ್ನು ನೋಡಿ, ಸ್ವಾಗತಿಸುವುದು ಎಂತಹ ಭವ್ಯವಾದ ವಿಷಯವಲ್ಲವೇ! ದೀರ್ಘಕಾಲದಿಂದ ನಾವು ಆತನಿಗಾಗಿ ಕಾದುಕೊಂಡಿದ್ದೇವೆ, ಆದರೆ ನಮ್ಮ ನಿರೀಕ್ಷೆಯು ಕುಂದಿಹೋಗಬಾರದು. ತನ್ನ ಮಹಿಮೆಯೊಡನೆ ಬರುವ ರಾಜಾಧಿರಾಜನಾದ ಕ್ರಿಸ್ತನನ್ನು ನೋಡುವಾಗ ನಾವು ಸದಾಕಾಲವೂ ಆಶೀರ್ವಾದ ಹೊಂದುವೆವು. ಕ್ರಿಸ್ತನು ತನ್ನ ಬಲದಿಂದಲೂ ಮಹಾ ಮಹಿಮೆಯಿಂದಲೂ ಬಂದು ತಾನು ವಿಮೋಚಿಸಿದವರನ್ನು ನಿತ್ಯವಾದ ಪರಲೋಕಕ್ಕೆ ಕರೆದುಕೊಂಡು ಹೋಗುವ ಸಮಯವನ್ನು ನಾವು ಸಮೀಪಿಸುತ್ತಿದ್ದೇವೆ. KanCCh 462.1

ಕ್ರಿಸ್ತನ ಎರಡನೇಬರೋಣದ ಸಂದೇಶ ಸಾರುವ ಈ ಮಹಾಕಾರ್ಯದ ಮುಕ್ತಾಯದ ಸಮಯದಲ್ಲಿ, ನಮಗೆ ಯಾವ ರೀತಿ ಎದುರಿಸಬೇಕೆಂದು ತಿಳಿಯದ ಗಲಿಬಿಲಿ ಹುಟ್ಟಿಸುವ ಅನೇಕ ಪರಿಸ್ಥಿತಿಯು ಬರಲಿದೆ. ಆದರೆ ಪರಲೋಕದ ತ್ರೈಯೇಕದೇವರು ಕಾರ್ಯಮಾಡುತ್ತಾನೆಂದು ನಾವು ಮರೆಯಬಾರದು. ಎಲ್ಲವೂ ದೇವರ ನಿಯಂತ್ರಣದಲ್ಲಿವೆ ಹಾಗೂ ಆತನ ವಾಗ್ದಾನಗಳೆಲ್ಲವೂ ನೆರವೇರುತ್ತವೆ. ತನ್ನನ್ನು ನೀತಿಯಿಂದ ಸೇವಿಸುವ ಒಂದು ಜನಾಂಗವನ್ನು ಈ ಲೋಕದಿಂದ ದೇವರು ಕೂಡಿಸುತ್ತಾನೆ. KanCCh 462.2