Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಾಮರಸ್ಯ ಹಾಗೂ ಐಕ್ಯತೆಯು ನಮ್ಮಅತ್ಯಂತ ಬಲವಾದ ಸಾಕ್ಷಿ

    ಜಗತ್ತು ನಮ್ಮ ವಿರುದ್ಧವಾಗಿರುವುದು ನಮಗೆ ಹೆಚ್ಚಿನ ಅಪಾಯ ತರುವುದಿಲ್ಲ. ಆದರೆ ಕ್ರೈಸ್ತರೆಂದು ಹೇಳಿಕೊಳ್ಳುವವರು ತಮ್ಮ ಹೃದಯದಲ್ಲಿ ಪೋಷಿಸಿಕೊಂಡು ಬರುವ ದುಷ್ಟತನವುತಾನೇ ದೇವರ ಸುವಾರ್ತಾಸೇವೆಗೆ ಹೆಚ್ಚಿನ ಅಡ್ಡಿ ಉಂಟುಮಾಡುತ್ತದೆ. ನಮ್ಮಲ್ಲಿರುವ ದ್ವೇಷ, ಪರಸ್ಪರ ಅಪನಂಬಿಕೆ, ಕೆಟ್ಟ ಆಲೋಚನೆಗಳು, ಅನುಮಾನಗಳು ಹಾಗೂ ಇತರರಲ್ಲಿ ತಪ್ಪುಕಂಡು ಹಿಡಿಯುವುದೇ ಆತ್ಮೀಕವಾಗಿ ನಾವು ಬಲಹೀನರಾಗುವುದಕ್ಕೆ ಖಚಿತವಾದ ಕಾರಣಗಳಾಗಿವೆ. ಈ ವಿಷಯದಲ್ಲಿ ಯಾಕೋಬನು ತನ್ನ ಪತ್ರಿಕೆಯಲ್ಲಿ “ಇದು ಮೇಲಣಿಂದ ಬಂದ ಜ್ಞಾನವಲ್ಲ, ಅದು ಭೂಸಂಬಂಧವಾದದ್ದು, ಪ್ರಾಕೃತ ಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು, ಮತ್ಸರವೂ, ಪಕ್ಷಭೇದವೂ ಇರುವ ಕಡೆ ಗಲಿಬಿಲಿಯೂ ಸಕಲ ವಿಧ ನೀಚಕೃತ್ಯಗಳೂ ಇರುವವು. ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು. ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂತದ್ದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂತದ್ದೂ ಆಗಿದೆ. ಇದರಲ್ಲಿ ಚಂಚಲವೂ ಕಪಟವೂ ಇಲ್ಲ. ಸಮಾಧಾನ ಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು” (4:15-18). ವಿವಿಧ ರೀತಿಯ ಸ್ವಭಾವವಿರುವ ವಿಶ್ವಾಸಿಗಳಲ್ಲಿ ಸಾಮರಸ್ಯ ಹಾಗೂ ಐಕ್ಯತೆ ಇರುವುದು ದೇವರು ಪಾಪಿಗಳನ್ನು ರಕ್ಷಿಸುವುದಕ್ಕೆ ತನ್ನ ಒಬ್ಬನೇ ಮಗನನ್ನು ಈ ಲೋಕಕ್ಕೆ ಕಳುಹಿಸಿಕೊಟ್ಟನು ಎಂಬುದಕ್ಕೆ ಬಲವಾದ ಸಾಕ್ಷಿಯಾಗಿದೆ. ಇಂತಹ ಸಾಕ್ಷಿಯನ್ನು ಹೇಳುವುದು ನಮಗೆ ದೇವರು ಕೊಟ್ಟ ಅವಕಾಶವಾಗಿದೆ. ಆದರೆ ಈ ಕಾರ್ಯ ಮಾಡುವುದಕ್ಕೆ ಮೊದಲು ನಾವು ನಮ್ಮನ್ನು ಕ್ರಿಸ್ತನ ಅಧೀನಕ್ಕೆ ಒಪ್ಪಿಸಿಕೊಡಬೇಕು. ನಮ್ಮ ಗುಣ, ನಡತೆಗಳು ಆತನ ಸ್ವಭಾವದೊಂದಿಗೆ ಸಾಮರಸ್ಯವಾಗಿರಬೇಕು. ನಮ್ಮ ಚಿತ್ತವನ್ನು ಆತನ ಚಿತ್ತಕ್ಕೆ ಒಪ್ಪಿಸಬೇಕು. ಆಗ ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ಯಾವುದೇ ಭಿನ್ನಭೇದವಿಲ್ಲದೆ, ದೇವರ ಸೇವೆಯನ್ನು ಒಗ್ಗಟ್ಟಿನಿಂದ ಮಾಡಬಹುದು. KanCCh 19.2

    ಕ್ರೈಸ್ತವಿಶ್ವಾಸಿಗಳ ನಡುವೆ ಇರುವ ಅಲ್ಪಸ್ವಲ್ಪ ಭಿನ್ನಾಭಿಪ್ರಾಯಗಳನ್ನು ದೊಡ್ಡದಾಗಿ ಮಾಡಿ ಚಿಂತಿಸುತ್ತಿದ್ದಲ್ಲಿ, ಅದು ಅವರ ಅನ್ಯೋನ್ಯತೆಯನ್ನು ನಾಶ ಮಾಡಬಹುದು. ವೈರಿಯಾದ ಸೈತಾನನು ನಮ್ಮಮೇಲೆ ಹತೋಟಿಹೊಂದಿ ನಮ್ಮನ್ನು ಶೋಧನೆಗೆ ಒಳಪಡಿಸುವಂತೆ ಅವನಿಗೆ ಅವಕಾಶ ಕೊಡಬಾರದು. ಪ್ರತಿಯೊಬ್ಬರೂ ದೇವರ ಬಳಿಗೆ ಬರುವಂತೆ ನಾವು ಎಲ್ಲರನ್ನೂ ಪ್ರೇರೇಪಿಸಬೇಕು. ಆಗ ನಾವು ಕರ್ತನಿಂದಲೇ ನೆಡಲ್ಪಟ್ಟ ನೀತಿಯವೃಕ್ಷದಂತಿದ್ದು, ಜೀವಜಲದ ನದಿಯಿಂದ ನೀರು ಹಾಯಿಸಲ್ಪಡುವೆವು ಹಾಗೂ ನಾವು ಎಷ್ಟೊಂದು ಫಲಭರಿತರಾಗಿರುವೆವಲ್ಲವೇ! “ನೀವು ಬಹಳ ಫಲ ಕೊಡುವುದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವುದು... ಎಂದು ಕ್ರಿಸ್ತನು ಹೇಳಿದ್ದಾನಲ್ಲವೇ? (ಯೋಹಾನ 15:8)KanCCh 20.1

    ಕ್ರಿಸ್ತನ ಪ್ರಾರ್ಥನೆಯನ್ನು ಸಂಪೂರ್ಣವಾಗಿ ನಂಬಿದಾಗ ಹಾಗೂ ದೇವಜನರು ತಮ್ಮ ಜೀವನದಲ್ಲಿ ಅದರ ಬೋಧನೆಗಳನ್ನು ಅಳವಡಿಸಿಕೊಂಡು ನಡೆದಾಗ, ನಮ್ಮಲ್ಲಿ ಐಕ್ಯತೆಯ ಕಾರ್ಯಗಳು ಕಂಡುಬರುವವು. ಸಹೋದರರಲ್ಲಿ ಕ್ರಿಸ್ತನ ಪ್ರೀತಿಯೆಂಬ ಬಂಗಾರದ ಬಂಧನವು ಐಕ್ಯತೆ ತರುವುದು. ದೇವರ ಪವಿತ್ರಾತ್ಮನು ಮಾತ್ರ ಇಂತಹ ಏಕತೆ ತರಲುಸಾಧ್ಯ. ತನ್ನನ್ನುತಾನೇ ಪರಿಶುದ್ಧ-ಗೊಳಿಸಿಕೊಂಡವನು ತನ್ನಶಿಷ್ಯರನ್ನೂ ಸಹ ಪವಿತ್ರಮಾಡಬಲ್ಲನು. ಆಗ ಆತನೊಂದಿಗೆ ಒಂದಾದ ದೇವಜನರು ಅತ್ಯಂತ ಪರಿಶುದ್ಧ ನಂಬಿಕೆಯ ಮೂಲಕ ಪರಸ್ಪರ ಒಂದಾಗುವರು. ದೇವರು ಬಯಸುವಂತ ಇಂತಹ ಐಕ್ಯತೆಯನ್ನು ತರಲು ನಾವು ಬಯಸಿದಾಗ, ಅಂತಹ ಐಕ್ಯತೆ ನಮ್ಮಲ್ಲಿ ಉಂಟಾಗುವುದು.KanCCh 20.2

    ಅಪಾರಸಂಖ್ಯೆಯ ಶಾಲಾಕಾಲೇಜುಗಳು, ಆಸ್ಪತ್ರೆಗಳಂತ ಸಂಸ್ಥೆಗಳು, ದೊಡ್ಡ ಕಟ್ಟಡಗಳು ಮತ್ತು ಹೊರಗಣ ಆಡಂಬರವನ್ನು ದೇವರು ಬಯಸುವುದಿಲ್ಲ. ಬದಲಾಗಿ ದೇವರಿಂದ ವಿಶೇಷವಾಗಿ ಆರಿಸಲ್ಪಟ್ಟ ಅಮೂಲ್ಯವಾದ ಜನಾಂಗವು ಸಾಮರಸ್ಯದಿಂದ ಒಟ್ಟಾಗಿ ಕಾರ್ಯ ಮಾಡುತ್ತಾ, ಕ್ರಿಸ್ತನಲ್ಲಿ ಒಂದಾಗಬೇಕೆಂಬುದು ದೇವರು ಬಯಸುತ್ತಾನೆ. ಪ್ರತಿಯೊಬ್ಬರೂ ಸಹ ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿ. ತಮ್ಮ ಆಲೋಚನೆ, ಮಾತು ಹಾಗೂ ಕಾರ್ಯಗಳ ಮೂಲಕ ಇತರರಿಗೆ ಸರಿಯಾದ ರೀತಿಯಲ್ಲಿ ಪರಿಣಾಮ ಉಂಟುಮಾಡಬೇಕು. ದೇವರ ಕೆಲಸಗಾರರೆಲ್ಲಾ ಈ ಸೇವೆಮಾಡಿದಾಗ, ಆತನ ಸೇವೆಯು ಸಂಪೂರ್ಣವಾಗಿಯೂ ಹಾಗೂ ಸಾಮರಸ್ಯದಿಂದಲೂ ಮುಕ್ತಾಯವಾಗುತ್ತದೆ. ಇಲ್ಲದಿದ್ದಲ್ಲಿ ದೇವರ ಸೇವೆಯು ಮುಗಿಯುವುದಿಲ್ಲ. KanCCh 20.3

    ಯಥಾರ್ಥ ನಂಬಿಕೆ, ಸ್ಥಿರವಾದ ಆರೋಗ್ಯಕರ ಮನಸ್ಸುಳ್ಳ ಹಾಗೂ ಒಳ್ಳೆಯದು ಕೆಟ್ಟದ್ದರ ನಡುವಣ ವ್ಯತ್ಯಾಸವನ್ನು ತಿಳಿದುಕೊಳ್ಳುವಂತ ವ್ಯಕ್ತಿಗಳನ್ನು ದೇವರು ತನ್ನ ಸೇವೆಗಾಗಿ ಕರೆಯುತ್ತಾನೆ. ಪ್ರತಿಯೊಬ್ಬರೂ ಸಹ ತಮ್ಮ ಎಚ್ಚರಿಕೆಯಲ್ಲಿರಬೇಕು. ಯೋಹಾನನು ಬರೆದ ಸುವಾರ್ತೆ 17ನೇ ಅಧ್ಯಾಯವನ್ನು ಓದಿ ಅದರಂತೆ ನಡೆಯಬೇಕು ಹಾಗೂ ಅಂತ್ಯಕಾಲಕ್ಕೆ ಅಗತ್ಯವಾದ ಸತ್ಯದ ಸಜೀವ ನಂಬಿಕೆಯನ್ನು ಕಾಪಾಡಿಕೊಳ್ಳಬೇಕು. ನಮ್ಮ ಅಭ್ಯಾಸಗಳನ್ನು ಕ್ರಿಸ್ತನ ಪ್ರಾರ್ಥನೆಗೆ ತಕ್ಕಂತೆ ಸಾಮರಸ್ಯದಿಂದಿರಲು ಸಹಾಯಕವಾಗುವ ಸ್ವನಿಯಂತ್ರಣದ ಅಗತ್ಯ ನಮಗಿದೆ. KanCCh 21.1

    ದೇವರ ಉದ್ದೇಶವನ್ನು ಸಂಪೂರ್ಣವಾಗಿ ನೆರವೇರಿಸುವ ತನ್ನ ಹಿಂಬಾಲಕರ ಮೇಲೆ ರಕ್ಷಕನ ಸಹಾನುಭೂತಿ ಇರುತ್ತದೆ. ಅವರು ಜಗತ್ತಿನಾದ್ಯಂತ ಹರಡಿಕೊಂಡಿದ್ದರೂ, ಆತನಲ್ಲಿ ಒಂದಾಗಿರಬೇಕು. ಆದರೆ ದೇವರ ಮಕ್ಕಳು ತಮ್ಮ ಚಿತ್ತವನ್ನು ಸಂಪೂರ್ಣವಾಗಿ ದೇವರಿಗೆ ಒಪ್ಪಿಸುವವರೆಗೆ, ಅವರು ಕ್ರಿಸ್ತನಲ್ಲಿ ಒಂದಾಗಿರಲು ಸಾಧ್ಯವಿಲ್ಲ.KanCCh 21.2