Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-24 — ಕ್ರೈಸ್ತರ ವಾಸಸ್ಥಳ

    ಕ್ರೈಸ್ತರು ಮನೆಯನ್ನು ಆರಿಸುವಾಗ, ಅವರ ಹಾಗೂ ಅವರ ಕುಟುಂಬಗಳ ಸುತ್ತಲಿನ ಧಾರ್ಮಿಕ ಮತ್ತು ನೈತಿಕ ಪ್ರಭಾವಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ದೇವರು ಬಯಸುತ್ತಾನೆ.KanCCh 171.1

    ವಾಸ ಮಾಡಲು ಮನೆ ಹುಡುಕುತ್ತಿರುವಾಗ, ಆಯ್ಕೆ ಮಾಡುವ ಮೊದಲು ಈ ಉದ್ದೇಶ ಮನಸ್ಸಿನಲ್ಲಿರಲಿ, ಐಶ್ವರ್ಯದ ಆಸೆ, ವಿನ್ಯಾಸ, ಅಥವಾ ಶೈಲಿ ಇಲ್ಲವೇ ಸಮಾಜದ ಸಂಪ್ರದಾಯಗಳಿಗೆ ನೀವು ಒಳಗಾಗಬಾರದು. ಸರಳವಾದ, ಆರೋಗ್ಯಕರವಾದ ಮತ್ತು ನಿಜವಾದ ಮೌಲ್ಯ ಇವುಗಳನ್ನು ಪರಿಗಣಿಸಬೇಕು.KanCCh 171.2

    ಮನುಷ್ಯನ ಕೈಕೆಲಸಗಳಾದ ಸಿಮೆಂಟಿನ ಕಟ್ಟಡಗಳು ಮಾತ್ರ ಕಂಡುಬರುವ, ಪಾಪಕ್ಕೆ ಪ್ರೇರಿಸುವ ಶಬ್ದ ಮತ್ತು ದೃಶ್ಯಗಳು ಹಾಗೂ ಅಶಾಂತಿ, ಕ್ಲೋಭೆ ಉಂಟುಮಾಡುವ ಗಲಭೆ ಪ್ರದೇಶಗಳಲ್ಲಿ ಕ್ರೈಸ್ತರು ವಾಸಮಾಡಬಾರದು. ಬದಲಾಗಿ ದೇವರ ಕೈಕೆಲಸವಾದ ಪ್ರಕೃತಿಯಿಂದ ಕೂಡಿರುವ ಸ್ಥಳಗಳನ್ನು ಆರಿಸಿಕೊಳ್ಳಿ, ನಿಸರ್ಗದ ಸುಂದರ, ಪ್ರಶಾಂತವಾದ, ಮನಸ್ಸಿಗೆ ಮುದ ನೀಡಿದ ವಿಶ್ರಾಂತಿ ಕೊಡುವಂತ ಸ್ಥಳಗಳನ್ನು ಹುಡುಕಬೇಕು. ನಮ್ಮ ಕಣ್ಣುಗಳ ಮುಂದೆ ಹಚ್ಚ ಹಸುರಾದ ಹೊಲಗದ್ದೆಗಳು, ತೋಪುಗಳು, ಬೆಟ್ಟಗುಡ್ಡಗಳು ಕಂಡುಬರಬೇಕು. ನಗರದ ಪರಿಸರ ಮಾಲಿನ್ಯದಿಂದ ಕಲುಷಿತಗೊಂಡಿರುವ ಧೂಳು, ಹೊಗೆಯಿಂದ ಆವೃತವಾಗಿರುವ ಸ್ಥಳದಿಂದ ದೂರವಿರಿ. ಶುಭ್ರವಾದ ನೀಲಾಕಾಶವು ಮನಸ್ಸಿಗೆ ಹರ್ಷತರಲಿ, ಚೈತನ್ಯಗೊಳಿಸುವ ನಿಸರ್ಗದತ್ತವಾದ ಶುದ್ಧಗಾಳಿ ಸೇವಿಸಿ.KanCCh 171.3

    ಒಂದು ಸಮಯ ಬರಲಿದೆ. ಕ್ರೈಸ್ತ ಕುಟುಂಬಗಳು ನಗರಗಳನ್ನು ಬಿಟ್ಟು ಹೊರಗೆ ಹೋಗಬೇಕು. ಮಕ್ಕಳನ್ನು ಹಳ್ಳಿಗಾಡು ಪ್ರದೇಶಕ್ಕೆ ಕರೆದೊಯ್ಯಬೇಕು. ತಂದೆ-ತಾಯಿಯರು ತಮ್ಮ ವರಮಾನಕ್ಕೆ ತಕ್ಕಂತ ಯೋಗ್ಯವಾದ ವಾಸಸ್ಥಳ ತೆಗೆದುಕೊಳ್ಳಬೇಕು. ವಾಸಸ್ಥಳದ ಕಿರಿದಾಗಿದ್ದು ಅದರ ಸುತ್ತಲೂ ವ್ಯವಸಾಯ ಮಾಡುವುದಕ್ಕೆ ಭೂಮಿಯಿರಬೇಕು.KanCCh 171.4

    ಸಾಧ್ಯವಾದರೆ ಮನೆಯು ನಗರದಿಂದ ದೂರವಿರಬೇಕು ಮತ್ತು ಮಕ್ಕಳು ವ್ಯವಸಾಯ ಮಾಡುವುದಕ್ಕೆ ತಕ್ಕಷ್ಟು ಹೊಲಗದ್ದೆಯಿರಬೇಕು. ಇಂತಹ ಭೂಮಿ ಮತ್ತು ಅನುಕೂಲಕರವಾದ ಮನೆ ಇರುವ ತಂದೆ-ತಾಯಿಯರು ರಾಜ, ರಾಣಿಯಂತಿರುವರು, ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಕೈತೋಟ ಹೇಗೆ ಮಾಡುವುದು, ಬೀಜ ಬಿತ್ತಲು ಭೂಮಿಯನ್ನು ಹದಮಾಡುವುದು, ಎಲ್ಲಾ ಕಳೆಗಳನ್ನು ಕಿತ್ತುಹಾಕುವಂತೆ ಅಸಹ್ಯಕರವೂ, ಹಾನಿಕರವೂ ಆದ ದುರಾಭ್ಯಾಸಗಳಿಂದ ದೂರವಿರಬೇಕೆಂದು ಶಿಕ್ಷಣ ನೀಡಬೇಕು. ಕೈತೋಟದಿಂದ ಕಳೆಯನ್ನು ಕಿತ್ತು ಬಿಸಾಡಿದಂತೆ ನಿಮ್ಮ ಜೀವನದಿಂದ ಕೆಟ್ಟಅಭ್ಯಾಸಗಳನ್ನು ಕಿತ್ತು ಬಿಸಾಡಬೇಕೆಂದು ತಂದೆ-ತಾಯಿಯರು ಮಕ್ಕಳಿಗೆ ಬೋಧಿಸಬೇಕು. ಈ ಪಾಠಗಳನ್ನು ಬೋಧಿಸಲು ಸಮಯ ತಗಲುತ್ತದೆ, ಆದರೆ ಅದು ಖಂಡಿತವಾಗಿಯೂ ದೊಡ್ಡ ಪ್ರತಿಫಲ ಕೊಡುತ್ತದೆ.KanCCh 171.5

    ಭೂಮಿಯ ಕೆಳಗೆ ಆಶೀರ್ವಾದಗಳು ಬಚ್ಚಿಡಲ್ಪಟ್ಟಿವೆ. ಧೈರ್ಯಶಾಲಿಗಳು, ದೂರದೃಷ್ಟಿಯುಳ್ಳವರು ಆದವರು ಈ ಸಂಪತ್ತನ್ನು ಕಂಡುಕೊಳ್ಳುವರು. ಅನೇಕ ರೈತರು ಒಕ್ಕಲುತನವು ಕೆಳದರ್ಜೆಯ ವೃತ್ತಿಯೆಂದು ಎಣಿಸುವುದರಿಂದ ಅವರ ಹೊಲಗದ್ದೆಗಳಲ್ಲಿ ನಿರೀಕ್ಷಿಸಿದಷ್ಟು ಬೆಳೆ ಬರುವುದಿಲ್ಲ. ಒಕ್ಕಲುತನವು ತಮಗೂ ಹಾಗೂ ತಮ್ಮ ಕುಟುಂಬಕ್ಕೂ ಆಶೀರ್ವಾದಕರವೆಂದು ಅವರು ಎಣಿಸುವುದಿಲ್ಲ.KanCCh 172.1

    ತಂದೆ-ತಾಯಿಯರು ತಮ್ಮ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅವರು ತಮ್ಮ ಮಕ್ಕಳಿಗೆ ಸರಿಯಾದ ಪಾಠ ತಿಳಿಸಿ ಹೇಳಬೇಕು. ಆಗ ಮಕ್ಕಳು ಈ ಲೋಕದ ಮನೆಯನ್ನು ಪರಲೋಕ ಮನೆಯೊಂದಿಗೆ ಸಂಯೋಜಿಸುವುದಕ್ಕೆ ಕಲಿತುಕೊಳ್ಳುವರು. ನಮ್ಮ ಕುಟುಂಬಗಳು ಸಾಧ್ಯವಾದಷ್ಟು ಪರಲೋಕದ ಮನೆಯ ಮಾದರಿಯಾಗಿರಬೇಕು. ಆಗ ತುಚ್ಛವಾದ ಹಾಗೂ ಹೀನವಾದ ಪಾಪಗಳಿಗೆ ಒಳಗಾಗಬೇಕೆಂಬ ಶೋಧನೆಯು ಇಲ್ಲದಂತಾಗುವುದು. ಈ ಲೋಕವು ಕ್ರೈಸ್ತರಾದ ನಮಗೆ ಕೇವಲ ತರಬೇತಿಯ ಸ್ಥಳವಾಗಿದೆ. ಕ್ರಿಸ್ತನು ನನ್ನನ್ನು ಪ್ರೀತಿಸಿ, ತನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗಾಗಿ ಸಿದ್ಧಮಾಡುವ ಭವನಗಳು ನಮ್ಮ ಶಾಶ್ವತವಾದ ವಾಸಸ್ಥಳವಾಗಿದೆ ಎಂದು ಮಕ್ಕಳಿಗೆ ತಂದೆ-ತಾಯಿಯರು ಶಿಕ್ಷಣ ನೀಡಬೇಕು. ತಂದೆ-ತಾಯಿಯರು ಮಾಡಬೇಕಾದ ಅತ್ಯುನ್ನತ ಕರ್ತವ್ಯವು ಇದೇ ಆಗಿದೆ.KanCCh 172.2

    ನೀವು ವಾಸ ಮಾಡಲು ಇಚ್ಚಿಸುವ ಕಟ್ಟಡಗಳು ಸಾಧ್ಯವಾದಷ್ಟು ಎತ್ತರದ ಪ್ರದೇಶದಲ್ಲಿರಬೇಕು. ಉತ್ತಮವಾದ ಚರಂಡಿ ವ್ಯವಸ್ಥೆ ಇರಬೇಕು. ಆಗ ಅಲ್ಲಿ ಯಾವುದೇ ಕೊಚ್ಚೆ, ಕೆಸರು ನಿಲ್ಲುವುದಕ್ಕೆ ಆಸ್ಪದವಿರುವುದಿಲ್ಲ. ಈ ವಿಷಯವನ್ನು ಅನೇಕರು ಅಲಕ್ಷ್ಯ ಮಾಡುತ್ತಾರೆ. ಉತ್ತಮ ಚರಂಡಿ ವ್ಯವಸ್ಥೆ ಇರದ ಕೆಲ ಪ್ರದೇಶಗಳಲ್ಲಿ ಅನಾರೋಗ್ಯ, ಕಾಯಿಲೆಗಳು, ಅಪಾಯಕಾರಿ ರೋಗ ರುಜಿನಗಳು, ಮಲೇರಿಯಾ ಹಾಗೂ ಕೆಲವು ಸಂದರ್ಭಗಳಲ್ಲಿ ಮರಣಕ್ಕೆ ಕಾರಣವಾಗುತ್ತವೆ.KanCCh 172.3

    ಮನೆಗಳಲ್ಲಿ ಧಾರಾಳವಾಗಿ ಗಾಳಿ, ಬೆಳಕು ಬರುವ ವ್ಯವಸ್ಥೆಯಿರಬೇಕು. ಮಲಗುವ ಕೋಣೆಗಳಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಗಾಳಿಯು ಧಾರಾಳವಾಗಿ ಬರುವ ವ್ಯವಸ್ಥೆ ಇರಬೇಕು. ಶುದ್ಧಗಾಳಿ ಹಾಗೂ ಸೂರ್ಯ ಕಿರಣಗಳು ಬೀಳದ ಕೊಠಡಿಗಳು ಮಲಗುವುದಕ್ಕೆ ಯೋಗ್ಯವಲ್ಲ.KanCCh 172.4

    ಮನೆಯಿಂದ ಸ್ವಲ್ಪ ದೂರದಲ್ಲಿ ಗಿಡಮರಗಳು, ಪೊದೆಗಳಿಂದ ಕೂಡಿದ ಸುಂದರವಾದ ಅಂಗಳ ಮತ್ತು ಕೈತೋಟವಿದ್ದಲ್ಲಿ ಸುಂದರವಾಗಿರುತ್ತದೆ. ಇದು ಕುಟುಂಬದ ಮೇಲೆ ಆರೋಗ್ಯಕರ ಪರಿಣಾಮ ಬೀರುತ್ತದೆ. ಇದನ್ನು ಚೆನ್ನಾಗಿ ಆರೈಕೆ ಮಾಡಿದಲ್ಲಿ, ಆರೋಗ್ಯಕ್ಕೆ ಯಾವುದೇ ತೊಂದರೆಯಾಗದು. ಆದರೆ ಮನೆಯ ಸುತ್ತಲೂ ನೆರಳು ನೀಡುವ ಮರಗಳು, ಪೊದೆಗಳು ದಟ್ಟವಾಗಿದ್ದಲ್ಲಿ, ಅವು ಸ್ವಚ್ಛವಾದ ಗಾಳಿಯ ಮುಕ್ತ ಸಂಚಾರಕ್ಕೆ ಮತ್ತು ಸೂರ್ಯನ ಬಿಸಿಲು ಬೀಳುವುದಕ್ಕೆ ಅಡ್ಡಿಯಾಗುವುದರಿಂದ ಆರೋಗ್ಯಕ್ಕೆ ಹಾನಿಕರವಾಗಬಲ್ಲದು. ಇದರ ಪರಿಣಾಮವಾಗಿ, ಮಳೆಗಾಲದಲ್ಲಿ ಮನೆಯಲ್ಲಿ ತೇವದಿಂದ ಕೂಡಿದ ವಾತಾವರಣವಿರುತ್ತದೆ.KanCCh 172.5